ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | 'ಭಿಲ್ವಾಡಾ ಮಾದರಿ' ಎಂದರೇನು? ಕೊರೊನಾ ಸೋಂಕು ತಡೆಗೆ ಅದೇಕೆ ಮಾದರಿ?

Last Updated 8 ಏಪ್ರಿಲ್ 2020, 5:53 IST
ಅಕ್ಷರ ಗಾತ್ರ
ADVERTISEMENT
""
""
""
""
""

ಕೊರೊನಾ ಸೋಂಕು ವ್ಯಾಪಕವಾಗಿ ಹರಡಬಹುದು ಎಂಬ ಆತಂಕವನ್ನು ಕಟ್ಟುನಿಟ್ಟಿನ ಲಾಕ್‌ಡೌನ್ ಮತ್ತು ಕ್ವಾರಂಟೈನ್ ಮೂಲಕ ಮೆಟ್ಟಿನಿಂತ ಯಶಸ್ವಿ ಉದಾಹರಣೆಯಾಗಿ ರಾಜಸ್ಥಾನದ 'ಭಿಲ್ವಾಡಾ ಮಾದರಿ' ನಮ್ಮೆದುರು ಇದೆ. ಸರ್ಕಾರ, ಅಧಿಕಾರಿಗಳು, ರಾಜಕಾರಿಣಿಗಳ ಇಚ್ಛಾಶಕ್ತಿಗೆ ಜನರ ಸಹಕಾರವೂ ಬೆರೆತರೆ ಎಂಥ ಪಿಡುಗನ್ನೂ ಮಣಿಸಬಹುದು ಎಂಬ ಭರವಸೆಯಾಗಿಯೂ 'ಭಿಲ್ವಾಡಾ ಮಾದರಿ' ಕಂಗೊಳಿಸುತ್ತಿದೆ.

---

ಕೊರೊನಾ ವೈರಸ್‌ ಸೋಂಕು ತಡೆಯಲು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿ ಎರಡು ವಾರ ಮುಗಿಯಿತು. ಮಂಗಳವಾರ ಸಂಜೆಯವರೆಗೆ ದೇಶದ ವಿವಿಧೆಡೆ ಕೊರೊನಾ ವೈರಸ್‌ ಸೋಂಕು 4,421 ಮಂದಿಗೆ ತಗುಲಿದೆ. 117 ಮಂದಿ ಮೃತಪಟ್ಟಿದ್ದಾರೆ. ಶೇ 80ರಷ್ಟು ಪಾಸಿಟಿವ್ ಪ್ರಕರಣಗಳು 62 ಜಿಲ್ಲೆಗಳಿಂದ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೊರೊನಾ ವೈರಸ್‌ ವೇಗವಾಗಿ ಹರಡುತ್ತಿರುವ, ಕೇಂದ್ರ ಸರ್ಕಾರ ಹಾಟ್‌ಸ್ಪಾಟ್ ಎಂದು ಘೋಷಿಸಿರುವ ದೇಶದ ಇತರ 62 ಜಿಲ್ಲೆಗಳಲ್ಲಿಯೂರಾಜಸ್ಥಾನದ 'ಭಿಲ್ವಾಡಾ ಮಾದರಿ' ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳು ಸಲಹೆ ಮಾಡಿದ್ದಾರೆ. ಈ ಶಿಫಾರಸಿನ ನಂತರ ಭಿಲ್ವಾಡಾ ಮಾದರಿ ಇಡೀ ದೇಶದ ಗಮನ ಸೆಳೆದಿದೆ. ಏನಿದು ಭಿಲ್ವಾಡಾ ಮಾದರಿ? ಅಲ್ಲಿ ಅಂಥದ್ದೇನಾಯಿತು? ಇಲ್ಲಿದೆ ಮಾಹಿತಿ.

ರಾಜಸ್ಥಾನದ ಭಿಲ್ವಾಡದಲ್ಲಿ ನಿರ್ಬಂಧ ಉಲ್ಲಂಘಿಸಿ ಬೀದಿಗಿಳಿದರೆ ಲಾಠಿ ಸ್ವಾಗತ...

ಏನಿದು ಭಿಲ್ವಾಡಾ ಮಾದರಿ?

ಈಗ ದೇಶದಾದ್ಯಂತ ಚರ್ಚೆಯಾಗುತ್ತಿರುವ, ಕೊರೊನಾ ಸೋಂಕು ತಡೆಗೆ ಅತ್ಯುತ್ತಮ ಮಾದರಿ ಎನಿಸಿಕೊಂಡಿರುವ 'ಭಿಲ್ವಾಡಾ ಮಾದರಿ'ಯ ಪರಿಕಲ್ಪನೆ ಹೀಗಿದೆ.

ಅತ್ಯಂತ ವೇಗವಾಗಿ, ದೊಡ್ಡಮಟ್ಟದ ಜನಸಮೂಹವನ್ನು ತಪಾಸಣೆಗೆ ಒಳಪಡಿಸುವುದು. ಸೋಂಕಿತರನ್ನು ಕ್ಷಿಪ್ರಗತಿಯಲ್ಲಿ ಪ್ರತ್ಯೇಕಿಸಿ ಕ್ವಾರಂಟೈನ್‌ಗೆ ಒಳಪಡಿಸುವುದು. ಅವರ ಓಡಾಟದ ಜಾಡನ್ನು ತ್ವರಿತವಾಗಿ ಪತ್ತೆ ಮಾಡಿ, ಅವರ ಒಡನಾಟಕ್ಕೆ ಬಂದವರ ಮಾಹಿತಿ ಕಲೆಹಾಕಿ, ಅವರನ್ನು ತಪಾಸಣೆಗೆ ಒಳಪಡಿಸುವುದು. ಅಗತ್ಯ ಬಿದ್ದರೆ ಅವರನ್ನೂ ಕ್ವಾರಂಟೈನ್‌ಗೆ ಒಳಪಡಿಸುವುದು. ಒಮ್ಮೆ ಸಮೀಕ್ಷಾ ಕಾರ್ಯ ಮುಗಿದ ನಂತರ ಅಷ್ಟಕ್ಕೇ ಸುಮ್ಮನಾಗದೆ ಮತ್ತೊಮ್ಮೆ ಅದೇ ಪ್ರದೇಶದಲ್ಲಿ, ಅದೇ ಜನರನ್ನು ತಪಾಸಣೆಗೆ ಒಳಪಡಿಸುವುದು. ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬಂದರೆ ಗಮನಿಸುವುದು.

ಎಲ್ಲಕ್ಕಿಂತ ಮುಖ್ಯವಾಗಿ ನಿರ್ಬಂಧದ ಆದೇಶಗಳನ್ನು ದಯಾದಾಕ್ಷಿಣ್ಯವಿಲ್ಲದೆ ಕಟ್ಟುನಿಟ್ಟಾಗಿ ಜಾರಿ ಮಾಡುವುದು. ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಆರೋಗ್ಯ ಕಾರ್ಯಕರ್ತರು ಶಿಫಾರಸು ಮಾಡಿದವರು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡುತ್ತಿದ್ದಾರೆ ಎಂದು ಮೇಲಿಂದ ಮೇಲೆ ಖಾತ್ರಿಪಡಿಸಿಕೊಳ್ಳುವುದು.

ಕ್ವಾರಂಟೈನ್ ಠಸ್ಸೆ

ರಾಜಸ್ಥಾನಕ್ಕೆ ಇಂಥದ್ದೊಂದು ಪ್ರಯೋಗ ಅನಿವಾರ್ಯವಾಗಿದ್ದು ಏಕೆ?

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ವರದಿಯಾಗಲು ಆರಂಭವಾದಾಗಭಿಲ್ವಾಡಾ ಜಿಲ್ಲೆಯು 'ಹಾಟ್‌ಸ್ಪಾಟ್' ಎಂಬ ಅಪಕೀರ್ತಿಗೆ ಒಳಗಾಯಿತು. ನಿನ್ನೆ ರಾತ್ರಿಯವರೆಗೆ (ಏಪ್ರಿಲ್ 06)ರಾಜಸ್ಥಾನದಲ್ಲಿ ಒಟ್ಟು 274 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿ, ಅದನ್ನು ದಯಾದಾಕ್ಷಿಣ್ಯವಿಲ್ಲದೆ ಜಾರಿಗೆ ತಂದ ಪರಿಣಾಮ ರಾಜಸ್ಥಾನದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿದಿವೆ.

ಕೋವಿಡ್-19 ಪತ್ತೆಯಾದ ತಕ್ಷಣ ಎಚ್ಚೆತ್ತುಕೊಂಡ ಭಿಲ್ವಾಡಾ ಜಿಲ್ಲಾಡಳಿತವು, ಸೋಂಕುವ್ಯಾಪಕವಾಗಿ ಹರಡುವುದನ್ನು ತಡೆಯಲು ಕರ್ಫ್ಯೂ ವಿಧಿಸಿತ್ತು. ಅತ್ಯಗತ್ಯ ವಸ್ತುಗಳ ಉತ್ಪಾದನೆ ಮತ್ತು ಸಾಗಾಟಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಮನೆಮನೆ ತಪಾಸಣೆಗಳು ವ್ಯಾಪಕವಾಗಿ ನಡೆದವು. ಪತ್ತೆಯಾದ ಸೋಂಕಿತರಿಗೆ ವೈರಸ್‌ ಹೇಗೆ ದಾಟಿರಬಹುದು ಎಂಬುದರ ವಿವರಗಳನ್ನು ಕಲೆಹಾಕಲಾಯಿತು. ಅಂಥವರ ಹುಡುಕಾಟಕ್ಕೆಂದೇ ವಿಶೇಷ ತಂಡಗಳನ್ನು ರಚಿಸಲಾಯಿತು.

ಭಿಲ್ವಾಡದ ಅಧಿಕಾರಿಗಳು ವೈರಸ್ ಎದುರುಸೋಲಲು, ಜನರನ್ನು ಬಲಿಕೊಡಲುಸಿದ್ಧರಿರಲಿಲ್ಲ. ಸೋಂಕಿತರನ್ನು ಪ್ರತ್ಯೇಕಿಸಿ, ಕ್ವಾರಂಟೈನ್‌ಗೆ ಒಳಪಡಿಸಲಾಯಿತು.ಕ್ರಮೇಣ ಸೋಂಕು ವರದಿಯಾಗುವ ಪ್ರಮಾಣ ಕಡಿಮೆಯಾಯಿತು.ದೇಶದ ಕೊರೊನಾ ಹಾಟ್‌ಸ್ಪಾಟ್ ಎನಿಸಿಕೊಂಡಿದ್ದ ಭಿಲ್ವಾಡಾದಲ್ಲಿ ಮಾರ್ಚ್ 30ರ ನಂತರ ಒಂದೂ ಪ್ರಕರಣ ವರದಿಯಾಗಿಲ್ಲ ಎನ್ನುವುದು ಅಲ್ಲಿ ಹೇಗೆ ಕೆಲಸ ನಡೆದಿರಬಹುದು ಎಂಬುದನ್ನು ಬಿಂಬಿಸುತ್ತದೆ.

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸರ್ಕಾರವೊಂದು ನಡೆಸಿದ ಅತ್ಯಂತ ಯಶಸ್ವಿ ಪ್ರಯೋಗ ಇದು ಎಂದೇ ಪರಿಗಣಿಸಲಾಗಿದೆ. ಸೋಂಕು ಪತ್ತೆಯಾದ ಮೊದಲ ನಾಲ್ಕು ದಿನಗಳಲ್ಲಿ 13 ಪ್ರಕರಣಗಳು ವರದಿಯಾದವು. ನಂತರದ11 ದಿನಗಳಲ್ಲಿ ಭಿಲ್ವಾಡಾದಲ್ಲಿವರದಿಯಾದ ಸೋಂಕುಪ್ರಕರಣಗಳ ಸಂಖ್ಯೆ 26.ಸೋಮವಾರದ (ಏಪ್ರಿಲ್ 6) ಹೊತ್ತಿಗೆ ಭಿಲ್ವಾಡಾದಲ್ಲಿ ಒಟ್ಟು 27 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 17 ಮಂದಿ ಗುಣವಾಗಿದ್ದಾರೆ. 7 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗಳಿಗೆ ಹೋಗಿದ್ದಾರೆ.

ರಾಜಸ್ಥಾನ ಸರ್ಕಾರ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಿದೆ.

ಅಷ್ಟು ದೊಡ್ಡ ಪ್ರಮಾಣದ ತಪಾಸಣೆಗೆ ಭಿಲ್ವಾಡಾ ಜಿಲ್ಲಾಡಳಿತ ಮುಂದಾಗಿದ್ದು ಏಕೆ?

ಭಿಲ್ವಾಡಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಓರ್ವ ವೈದ್ಯರಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಮಾರ್ಚ್ 19ರಂದು ಈ ಪ್ರಕರಣ ವರದಿಯಾದ ನಂತರಸ ಅತ್ಯಲ್ಪ ಸಮಯದಲ್ಲಿ ಪ್ರಕರಣಗಳ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ವರದಿಯಾದವು.

ಖಾಸಗಿ ಆಸ್ಪತ್ರೆಯೇ ಸೋಂಕಿನ ಕೇಂದ್ರವಾಗಿತ್ತು. ಅಲ್ಲಿನ ವೈದ್ಯರಲ್ಲಿ ಸೋಂಕು ಪತ್ತೆಯಾದ ನಂತರ ಇತರ ಐದು ಪ್ರಕರಣಗಳು ಹಿಂದೆಹಿಂದೆಯೇ ವರದಿಯಾದವು. ಮಾರ್ಚ್ 21 ಮತ್ತು 23ರಂದು ಜಿಲ್ಲೆಯಲ್ಲಿ ಇನ್ನೂ 13 ಪ್ರಕರಣಗಳು ವರದಿಯಾದವು.ಸೋಂಕು ಪತ್ತೆಯಾದವರ ಪೈಕಿ ಬಹುತೇಕ ಮಂದಿ ಖಾಸಗಿ ಆಸ್ಪತ್ರೆಯ ವೈದ್ಯರೇ ಆಗಿದ್ದರು. ಈ ವೈದ್ಯರು ಒಳರೋಗಿ ಮತ್ತು ಹೊರರೋಗಿಗಳ ಜೊತೆಗೆ ಸಂಪರ್ಕ ಹೊಂದಿದ್ದರು.

ಮಾರ್ಚ್ 25ರ ಹೊತ್ತಿಗೆ ಭಿಲ್ವಾಡದಲ್ಲಿಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಯಿತು. ಅವರೆಲ್ಲರೂ ಅದೇ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಅಥವಾ ರೋಗಿಗಳೇ ಆಗಿದ್ದರು. ಈ ಬೆಳವಣಿಗೆಯ ನಂತರ ಸರ್ಕಾರವು ಆಸ್ಪತ್ರೆಯಿದ್ದ ಪ್ರದೇಶದಿಂದ 1 ಕಿ.ಮೀ. ವ್ಯಾಪ್ತಿಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಿತು. ಖಾಸಗಿ ಆಸ್ಪತ್ರೆಯನ್ನು ಸೋಂಕಿನ ಕೇಂದ್ರ ಎಂದು ಘೋಷಿಸಿ, ಆ ಪ್ರದೇಶದಲ್ಲಿ ಯಾರೂ ಓಡಾಡುವಂತಿಲ್ಲ ಎಂದು ನಿರ್ಬಂಧಿಸಿತು.

ಭಿಲ್ವಾಡಾ ಜಿಲ್ಲೆಯಲ್ಲಿ ಮಾರ್ಚ್ 26ರಂದು ಕೋವಿಡ್-19 ರೋಗಿಯೊಬ್ಬರು ಮೃತಪಟ್ಟರು. ಇದು ಕೊರೊನಾ ವೈರಸ್ ಸೋಂಕಿನಿಂದ ಜಿಲ್ಲೆಯಲ್ಲಿ ಆದಮೊದಲ ಮರಣ. 76 ವರ್ಷದ ಆ ವೃದ್ಧನಲ್ಲಿ ಕೊರೊನಾ ವೈರಸ್ಪಾಸಿಟಿವ್ ವರದಿ ಬಂದಿತ್ತು. ಅವರ ಮೊಮ್ಮಗ ಮತ್ತು ಮೊಮ್ಮಗಳಲ್ಲೂ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು.

ವೃದ್ಧನ ಸಾವಿನ ಕೆಲವೇ ಗಂಟೆಗಳ ನಂತರ ಜಿಲ್ಲೆಯಲ್ಲಿ ಮತ್ತೊಬ್ಬರ ಸಾವು ವರದಿಯಾಯಿತು. 60 ವರ್ಷದ ಮತ್ತೊಬ್ಬ ವ್ಯಕ್ತಿಯೂ ಮಾರ್ಚ್ 26ರಂದು ರಾತ್ರಿ ಕೋವಿಡ್-19ಕ್ಕೆ ಬಲಿಯಾದರು.

ಆದರೆ ಈವರೆಗೂ ರಾಜಸ್ಥಾನದ ರಾಜ್ಯ ಸರ್ಕಾರವು ಈ ಸಾವುಗಳಿಗೆ ಕೋವಿಡ್-19 ಕಾರಣ ಎಂದು ಒಪ್ಪಿಕೊಳ್ಳುತ್ತಿಲ್ಲ. ಅವರ ಸಾವಿಗೆ ಕೋವಿಡ್-19ಕ್ಕಿಂತ ಕಿಡ್ನಿ ವೈಫಲ್ಯ, ಅತಿ ರಕ್ತದೊತ್ತಡ ಕಾರಣ ಎನ್ನುವುದು ಸರ್ಕಾರದ ವಾದ. ತಮಗಿದ್ದ ಆರೋಗ್ಯಸಮಸ್ಯೆಗಳಿಗೆ ಅವರು ಅದಾಗಲೇ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರುಎಂದು ಸರ್ಕಾರ ಹೇಳುತ್ತದೆ.

ಆದರೆ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಪಾಸಿಟಿವ್ ಪ್ರಕರಣಗಳಿಗೆ ಕಡಿವಾಣ ಹಾಕಲೇಬೇಕಾದ ಒತ್ತಡ ರಾಜಸ್ಥಾನ ಸರ್ಕಾರ ಮತ್ತು ಭಿಲ್ವಾಡಾ ಜಿಲ್ಲಾಡಳಿತದಮೇಲಿತ್ತು.

ರಾಜಸ್ಥಾನದಲ್ಲಿ ಜನರ ತಪಾಸಣೆ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರು

ಮೈಕೊಡವಿ ನಿಂತ ಆಡಳಿತ

'ಭಿಲ್ವಾಡಾ ಮಾದರಿ ಎಂದರೆ ಇಷ್ಟೇ ನೋಡಿ. ಯಾರ ಪರಿಸ್ಥಿತಿ ಏನು? ಅವರ ಕಷ್ಟಸುಖಗಳೇನು? ಅವರು ಒಪ್ಪುತ್ತಾರೋ ಇಲ್ಲವೋ... ಎಂಬುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಅಧಿಕಾರ ಬಳಸಿ ಜನರ ಓಡಾಟಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರುವುದು. ವ್ಯಾಪಕವಾಗಿ ಮೇಲಿಂದ ಮೇಲೆ ತಪಾಸಣೆಗಳನ್ನು ನಡೆಸಿ, ಸೋಂಕಿತರು ಅಥವಾ ಸೋಂಕು ಇರಬಹುದೆಂಬ ಶಂಕೆ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸುವುದು' ಎನ್ನುತ್ತಾರೆರಾಜಸ್ಥಾನದ ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ರೋಹಿತ್ ಕುಮಾರ್ ಸಿಂಗ್.

ಮಾರ್ಚ್ 22ರಂದು ಮೊದಲ ಪ್ರಕರಣ ವರದಿಯಾದ ಮೂರೇ ದಿನಗಳಲ್ಲಿ ತಕ್ಷಣ ಆರೋಗ್ಯ ಇಲಾಖೆ ಮತ್ತು ಭಿಲ್ವಾಡಾ ಜಿಲ್ಲಾಡಳಿತದ ಅಧಿಕಾರಿಗಳು ಸುಮಾರು 850 ತಂಡಗಳನ್ನು ರಚಿಸಿ, ಬೀದಿಬೀದಿಗಳಿಗೆ ಕಾರ್ಯಾಚರಣೆಗೆಂದು ಇಳಿದರು. 56 ಸಾವಿರ ಮನೆಗಳಲ್ಲಿದ್ದ2,81 ಲಕ್ಷಜನರನ್ನು ತಪಾಸಣೆಗೆ ಒಳಪಡಿಸಿದರು.

ಈ ಸಂದರ್ಭ ಸುಮಾರು 2,250 ಮಂದಿ ವಿವಿಧ ರೀತಿಯ ಜ್ವರಗಳಿಂದ ಬಳಲುತ್ತಿರುವುದು ಪತ್ತೆಯಾಯಿತು. ಅವರೆಲ್ಲರನ್ನೂ ಮನೆಗಳಲ್ಲಿಯೇ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಯಿತು. ಕ್ವಾರಂಟೈನ್ ಅದೇಶಗಳನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡಲಾಯಿತು.

ಕೊರೊನಾ ವೈರಸ್‌ ಪಾಸಿಟಿವ್ ಬಂದವರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದವರನ್ನು ಜಾಲಾಡಿ ಪರೀಕ್ಷೆಗೆ ಒಳಪಡಿಸಿದರು. ಆರೋಗ್ಯ ಇಲಾಖೆಯು ವಿವರಣಾತ್ಮಕ ಚಾರ್ಟ್‌ಗಳನ್ನು ಸಿದ್ಧಪಡಿಸಿಕೊಂಡಿತ್ತು. ಸೋಂಕಿತರು ಒಡನಾಟ ಇಟ್ಟುಕೊಂಡಿದ್ದ ಯಾರನ್ನೂ ಬಿಡಲಿಲ್ಲ. ರಾಜಸ್ಥಾನದ ವಿವಿಧ ಜಿಲ್ಲೆಗಳು ಸೇರಿದಂತೆಹಿಮಾಚಲಪ್ರದೇಶ, ಮಧ್ಯಪ್ರದೇಶ,ಉತ್ತರ ಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ 498 ಮಂದಿಗೆ ಇಲ್ಲಿನವರಿಂದ ಸೋಂಕು ಹರಡಿರಬಹುದೆಂಬ ಶಂಕೆಯ ಮೇಲೆ ಮತ್ತೊಂದುಪಟ್ಟಿಯನ್ನು ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಮಾರ್ಚ್ 26ರ ಹೊತ್ತಿಗೆ ಕ್ವಾರಂಟೈನ್ ಠಸ್ಸೆ ಹಾಕಿಸಿಕೊಂಡವರ ಸಂಖ್ಯೆ6,445 ಮುಟ್ಟಿತು.ಕೇವಲ ಐದು ದಿನಗಳಲ್ಲಿ ಅಂದರೆ ಮಾರ್ಚ್ 22ರಿಂದ 27ರ ನಡುವೆ ಜಿಲ್ಲೆಯ ವಿವಿಧೆಡೆ ಸುಮಾರು4.35 ಲಕ್ಷ ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ,22 ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸಿದರು.

ರಾಜ್ಯ ಆರೋಗ್ಯ ಇಲಾಖೆಯು ಈ ಕಾರ್ಯಕ್ಕಾಗಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿತು. ಈ ಕಾರ್ಯಕ್ಕಾಗಿ ಆಪ್‌ ಒಂದನ್ನು ಅಭಿವೃದ್ಧಿಪಡಿಸಿ ಬಳಸಲಾಯಿತು. ಮನೆಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಿದ್ದವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿತ್ತು. ಜಿಐಎಸ್‌ (ಜಿಯಾಗ್ರಾಫಿಕಲ್ ಇನ್‌ಫರ್ಮೇಶನ್ ಸಿಸ್ಟಂ) ಮೂಲಕ ಅವರ ಚಲನವಲನಗಳ ಮೇಲೆಯೂ ನಿಗಾ ಇರಿಸಲಾಗಿತ್ತು.

ರಾಜ್ಯ ಸರ್ಕಾರವು ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿತ್ತು. ಸ್ಥಳೀಯ ಪೊಲೀಸರು ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು.

ಲಾಕ್‌ಡೌನ್, ತಪಾಸಣೆ, ಕ್ವಾರಂಟೈನ್...

ಪರಿಶ್ರಮಕ್ಕೆ ಫಲ ಸಿಕ್ತು, ಸೋಂಕು ಕಡಿಮೆಯಾಯ್ತು

ಭಿಲ್ವಾಡಾ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಂಕು ವರದಿಯಾಗಿದ್ದು ಮಾರ್ಚ್ 19ಕ್ಕೆ. ನಂತರದ ದಿನಗಳಲ್ಲಿ ಸರಸರನೇ ಸೋಂಕಿನ ಗ್ರಾಫ್ ಏರುತ್ತಿತ್ತು.ಮಾರ್ಚ್ 30ರ ನಂತರ ಮೊದಲ ಬಾರಿಗೆ ಈ ಗ್ರಾಫ್ ಇಳಿಕೆಯಾಯಿತು. ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಮಾಡಿದ್ದು ಸೋಂಕು ಹರಡದಿರಲು ಮುಖ್ಯ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ.ಮಾರ್ಚ್ 31ರಂದು ಒಂದೇ ಒಂದು ಪ್ರಕರಣವೂ ವರದಿಯಾಗಲಿಲ್ಲ. ಸಮೀಕ್ಷೆಗೆಂದು ಟೊಂಕಕಟ್ಟಿ ನಿಂತಿದ್ದವರಿಗೆಅದು ನೆಮ್ಮದಿ ಕೊಟ್ಟ ವಿಚಾರ.

ಸೋಂಕು ಪತ್ತೆಯಾದ ರೋಗಿಗಳಿಗೆ ಹೈಡ್ರೊಕ್ಸಿಕ್ಲೊರೊಕ್ವೀನ್ (ಎಚ್‌ಸಿಕ್ಯು), ಟಮಿಫ್ಲೂ ಮತ್ತು ಎಚ್‌ಐವಿಗೆ ನೀಡುವ ಔಷಧಿಗಳನ್ನು ನೀಡಿ ಚಿಕಿತ್ಸೆ ಮಾಡಲಾಯಿತು. ಏಪ್ರಿಲ್ 3ರಂದು ಜಿಲ್ಲೆಯ17 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಘೋಷಿಸಲಾಯಿತು.
ಜಿಲ್ಲೆಯು ಏಪ್ರಿಲ್‌ 3ರಿಂದ 10 ದಿನಗಳ ಸುದೀರ್ಘ 'ಕಟ್ಟುನಿಟ್ಟಿನ ಕರ್ಫ್ಯೂ'ಗೆ ಒಳಪಟ್ಟಿತು.

'ಕರ್ಫ್ಯೂ ಅವಧಿಯಲ್ಲಿ ಔಷಧಿ ಮತ್ತು ಆಹಾರ ಧಾನ್ಯಗಳನ್ನು ಮಾರುವ ಅಂಗಡಿಗಳಿಗೂ ವಿನಾಯ್ತಿ ಕೊಟ್ಟಿರಲಿಲ್ಲ.ಸಾರ್ವಜನಿಕರಿಗೆ ಅತ್ಯಗತ್ಯವಿರುವ ವಸ್ತುಗಳನ್ನು ಜನರ ಮನೆ ಬಾಗಿಲಿಗೇ ಪೊಲೀಸರು ತಲುಪಿಸಿದರು'ಎಂದುಭಿಲ್ವಾಡಾದ ಜಿಲ್ಲಾಧಿಕಾರಿ ರಾಜೇಂದ್ರ ಭಟ್ ಹೇಳುತ್ತಾರೆ.ಇಂಥ ಕಟ್ಟುನಿಟ್ಟು ಆದೇಶವನ್ನು ಮಾನ್ಯ ಮಾಡಿದ ಜನರನ್ನು ನಾವು ಶ್ಲಾಘಿಸಬೇಕಲ್ಲವೇ?

ಮಾರ್ಚ್‌ 31ರ ನಂತರದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಕೇವಲ ಒಂದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಈವರೆಗೆ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 27ಕ್ಕೆ ಮುಟ್ಟಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡಬಹುದು ಎಂಬ ಆತಂಕವನ್ನು ಕಟ್ಟುನಿಟ್ಟಿನ ಲಾಕ್‌ಡೌನ್ ಮತ್ತು ಕ್ವಾರಂಟೈನ್ ಮೂಲಕ ಮೆಟ್ಟಿನಿಂತ ಯಶಸ್ವಿ ಉದಾಹರಣೆಯಾಗಿ ರಾಜಸ್ಥಾನದ 'ಭಿಲ್ವಾಡಾ ಮಾದರಿ' ನಮ್ಮೆದುರು ಇದೆ. ಸರ್ಕಾರ, ಅಧಿಕಾರಿಗಳು, ರಾಜಕಾರಿಣಿಗಳ ಇಚ್ಛಾಶಕ್ತಿಗೆ ಜನರ ಸಹಕಾರವೂ ಬೆರೆತರೆ ಎಂಥ ಪಿಡುಗನ್ನೂ ಮಣಿಸಬಹುದು ಎಂಬ ಭರವಸೆಯಾಗಿಯೂ 'ಭಿಲ್ವಾಡಾ ಮಾದರಿ' ಕಂಗೊಳಿಸುತ್ತಿದೆ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ಡಿ.ಎಂ.ಘನಶ್ಯಾಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT