ಉತ್ತರಾಖಂಡದ ಹರಿದ್ವಾರದಲ್ಲಿ ಡಿ. 17, 18ರಂದು ನಡೆದ ‘ಧರ್ಮ ಸಂಸತ್’ ಕಾರ್ಯಕ್ರಮದಲ್ಲಿ ಕೆಲವು ಸಂತರು ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು. ಈ ಹೇಳಿಕೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಅದಾದ ಬಳಿಕ ಬಿಜೆಪಿ ಸದಸ್ಯರು ಮತ್ತು ಬೆಂಬಲಿಗರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿಡಿಯೊವನ್ನು ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಧರ್ಮ ಸಂಸತ್ ನಡೆದ ಬಳಿಕ ಈ ವಿಡಿಯೊವನ್ನು ಓವೈಸಿ ಚಿತ್ರೀಕರಿಸಿದ್ದಾರೆ. ಅದರಲ್ಲಿ ಹಿಂದೂಗಳಿಗೆ ನೇರವಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಧರ್ಮ ಸಂಸತ್ ಕಾರ್ಯಕ್ರಮದ ವಿರುದ್ಧ ಪೊಲೀಸರಿಗೆ ದೂರು ನೀಡಲು ಉತ್ತರಾಖಂಡ ಎಐಎಂಐಎಂಗೆ ಅವರು ನಿರ್ದೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.