ಫೆ.19ರಂದು ಮುಂಬೈನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಠಾಕ್ರೆ ಅವರು, ಜಮ್ಮು ಕಾಶ್ಮೀರದಲ್ಲಿ ಹತ್ಯೆಗೀಡಾದ ಸೇನೆಯ ಯೋಧ ‘ಔರಂಗಜೇಬ್’ ದೇಶಕ್ಕಾಗಿ ಪ್ರಾಣ ನೀಡಿದ್ದ ಘಟನೆಯನ್ನು ವಿವರಿಸಿದ್ದರು. ‘2018ರಲ್ಲಿ ಔರಂಗಜೇಬ್ ಎಂಬ ಸೈನಿಕನನ್ನು ಅಪಹರಿಸಿದ್ದ ಉಗ್ರರು ಬಳಿಕ ಹತ್ಯೆ ಮಾಡಿದ್ದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದ ಆತ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂಬ ಕಾರಣಕ್ಕೆ ಆತನನ್ನು ನನ್ನ ಸಹೋದರ ಎನ್ನದಿರಲು ಆಗದು. ಆತ ಖಂಡಿತವಾಗಿ ನನ್ನ ಸಹೋದರನೇ’ ಎಂದು ಠಾಕ್ರೆ ಹೇಳಿದ್ದರು. ಆದರೆ ಠಾಕ್ರೆ ಅವರ ಭಾಷಣದ ವಿಡಿಯೊದ ಆಯ್ದ ಭಾಗವನ್ನು ಬಳಸಿಕೊಂಡು, ಅವರು ಮೊಘಲ್ ದೊರೆ ಔರಂಗಜೇಬ್ ಕುರಿತು ಈ ಮಾತು ಹೇಳಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ.