ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಜಾಗರಣೆಗೆ ವೈವಿಧ್ಯದ ತಿನಿಸುಗಳು

Last Updated 1 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಶಿವನ ಹಬ್ಬ ಶಿವರಾತ್ರಿಯಲ್ಲಿ ಉಪವಾಸ ಹಾಗೂ ಜಾಗರಣೆಗೆ ಮೊದಲ ಪ್ರಾಶಸ್ತ್ಯ. ರಾತ್ರಿಯಿಡಿ ಜಾಗರಣೆ ಕೂತು ಶಿವನನ್ನು ಜಪಿಸುತ್ತಾ ಉಪವಾಸ ಮಾಡುವುದು ವಾಡಿಕೆ. ದೇಶದ ಮೂಲೆ ಮೂಲೆಯಲ್ಲೂ ಸಡಗರ, ಭಕ್ತಿಯಿಂದ ಆಚರಿಸುವ ಶಿವರಾತ್ರಿ ಉಪವಾಸದ ಸಮಯದಲ್ಲಿ ಕೆಲ ಅಡುಗೆಗಳನ್ನು ಮಾಡಿ ಉಣ್ಣಬಹುದು. ಉಪ್ಪಿಟ್ಟು, ಅವಲಕ್ಕಿ, ತಂಬಿಟ್ಟಿನ ಬದಲು ಒಂದಷ್ಟು ಹೊಸ ರುಚಿಯ ಉಪವಾಸದ ಆಹಾರಗಳನ್ನು ಪರಿಚಯಿಸಿದ್ದಾರೆ ಲೀಲಾ ಚಂದ್ರಶೇಖರ.

ಸಬ್ಬಕ್ಕಿ ಆಲೂ ಉಪ್ಪಿಟ್ಟು
ಬೇಕಾಗುವ ಸಾಮಾನುಗಳು
: ಸಬ್ಬಕ್ಕಿ – 1ಕಪ್‌ (4ಗಂಟೆಗಳ ಕಾಲ ನೆನೆಸಿದ್ದು), ಹುರಿದು ಸಿಪ್ಪೆ ತೆಗೆದ ಕಡ್ಲೆಕಾಯಿ ಬೀಜದ ಪುಡಿ – 1 ಕಪ್‌, ಹೆಚ್ಚಿದ ಆಲೂಗೆಡ್ಡೆ– 2, ಎಣ್ಣೆ ಸ್ವಲ್ಪ. ಒಗ್ಗರಣೆ ಸಾಮಾನುಗಳು.

ತಯಾರಿಸುವ ವಿಧಾನ: ಸಾಸಿವೆ, ಜೀರಿಗೆ, ಒಗ್ಗರಣೆ ಮಾಡಿ, ಆಲೂಗೆಡ್ಡೆ, ಒಮೆಣಸಿನಕಾಯಿ, ಸ್ವಲ್ಪ ಹಸಿಮೆಣಸಿನಕಾಯಿ, ಹಾಕಿ ಹುರಿದು ನೆನೆಸಿರುವ ಸಬ್ಬಕ್ಕಿ, ಕಡ್ಲೆಕಾಯಿ ಬೀಜದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಕಲೆಸಿ, ತಟ್ಟೆ ಮುಚ್ಚಿ ಆಗಾಗ್ಗೆ ತೆಗೆದು ಸಬ್ಬಕ್ಕಿ ಬೇಯುವವರೆಗೂ ಹೀಗೆ ಮಾಡಿ. ಕೊತ್ತಂಬರಿಸೊಪ್ಪು ಮತ್ತು ನಿಂಬೆರಸ ಸೇರಿಸಿ ಕಲೆಸಿ ಬಿಸಿ ಬಿಸಿ ಸವಿಯಿರಿ.

**


ದಪ್ಪ ಸಬ್ಬಕ್ಕಿ ಮತ್ತು ಗೆಣಸಿನ ಹಲ್ವ
ಬೇಕಾಗುವ ಸಾಮಗ್ರಿಗಳು:
ದಪ್ಪ ಸಬ್ಬಕ್ಕಿ - 3 ಗಂಟೆ ನೆನೆಸಿದ್ದು 1 ಕಪ್, ಬಿಳಿ ಉಂಡೆ ಬೆಲ್ಲದ ಪುಡಿ – 1 ಕಪ್, ಹಾಲು – 1/2 ಕಪ್‌, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಗೆಣಸಿನ ಹೋಳುಗಳು ಹದವಾಗಿ ಬೇಯಿಸಿದ್ದು – 1 ಕಪ್‌, ತುಪ್ಪ – ಸ್ವಲ್ಪ

ತಯಾರಿಸುವ ವಿಧಾನ: ತಳ ದಪ್ಪ ಇರುವ ಪಾತ್ರೆ/ಕೋಟಿಂಗ್ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಬಾಡಿಸಿ ತೆಗೆದಿಡಿ. ಅದೇ ತುಪ್ಪಕ್ಕೆ ಗೆಣಸಿನ ತುಂಡುಗಳನ್ನು ಹಾಕಿ ಬಾಡಿಸಿ ತೆಗೆದಿಡಿ. ಬಾಣಲೆಗೆ ಹಾಲು, ಸ್ವಲ್ಪ ನೀರು ಸೇರಿಸಿ. ನೆನೆಸಿದ ಸಬ್ಬಕ್ಕಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಮೆತ್ತಗಾಗುವಂತೆ ಬೇಯಿಸಿ. ಬೆಲ್ಲದ ಪುಡಿ ಹಾಕಿ ಕೆದಕಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿರಿ. ಹಲ್ವದ ಹದ ಬಂದಾಗ ಮತ್ತೊಂದು ಚಮಚ ತುಪ್ಪ ಸೇರಿಸಿ ಬೌಲ್‌ಗೆ ಹಾಕಿ. ಕರಿದ ದ್ರಾಕ್ಷಿ ಗೋಡಂಬಿಗಳನ್ನು ಮೇಲಿನಿಂದ ಹಾಕಿ ಸವಿಯಲು ನೀಡಿ.

**


ರಾಜಗಿರಾ ಲಾಡು
ಬೇಕಾಗುವ ಸಾಮಗ್ರಿಗಳು:
ಸ್ವಚ್ಛ ಮಾಡಿದ ರಾಜಗಿರಾ ಕಾಳುಗಳನ್ನು ಹುರಿದು ಮಾಡಿದ ಅರಳು – 2 ಕಪ್, ಬೆಲ್ಲದ ಪುಡಿ – 2 ಕಪ್, ಹುರಿದ ಕಡ್ಲೇಬೀಜದ ಪುಡಿ – 1,1/2 ಕಪ್, ಹುರಿದ ಕೊಬ್ಬರಿ ತುರಿ – 1/2 ಕಪ್, (ರಾಜಗಿರಾ ಕಾಳುಗಳನ್ನು ಬಾಣಲೆಗೆ ಹಾಕಿ ಹುರಿದರೆ ಅರಳಿನಂತಾಗುತ್ತದೆ. ಹಳೆಯದಾದರೆ ತುಂಬಾ ಚೆನ್ನಾಗಿ ಅರಳುತ್ತದೆ.) ತುಪ್ಪ – 1/2 ಕಪ್

ತಯಾರಿಸುವ ವಿಧಾನ: ಬೆಲ್ಲದ ಪುಡಿಗೆ ಸ್ವಲ್ಪ ತುಪ್ಪ, ನೀರು ಹಾಕಿ ಉಂಡೆ ಪಾಕ ಮಾಡಿ. ಇದಕ್ಕೆ ಕಡ್ಲೆಬೀಜದ ಪುಡಿ, ಕೊಬ್ಬರಿ ತುರಿ, ರಾಜಗಿರಾದ ಅರಳು ಎಲ್ಲಾ ಹಾಕಿ ಚೆನ್ನಾಗಿ ಒಂದುಗೂಡಿಸಿ ಸ್ವಲ್ಪ ತಣ್ಣಗಾದ ಮೇಲೆ ಲಾಡು ಕಟ್ಟಬೇಕು .ಬಿಸಿ ಇದ್ದಾಗಲೇ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮ ಮಾಡಿದರೆ ಬೇಕಾದ ಆಕಾರಕ್ಕೆ ಕತ್ತರಿಸಿ ಬರ್ಫಿ ತರಹ ಮಾಡಬಹುದು. ತುಂಬಾ ಚೆನ್ನಾಗಿರುತ್ತದೆ. ಇದರಲ್ಲಿ ಕ್ಯಾಲ್ಸಿಯಮ್ ಹೆಚ್ಚಾಗಿರುತ್ತದೆ.

**


ಭತ್ತದ ಅರಳಿನ ಮೊಸರನ್ನ
ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ:
ಭತ್ತದ ಅರಳು ಒಂದು ಪಾವು, ಕಾಯಿತುರಿ ಒಂದು ಬಟ್ಟಲು, ಮೊಸರು ಒಂದು ಬಟ್ಟಲು, ಕೊತ್ತಂಬರಿಸೊಪ್ಪು, ಕರಿಬೇವು ಸ್ವಲ್ಪ. ರುಚಿಗೆ ತಕ್ಕಷ್ಟು ಉಪ್ಪು. ಹಸಿಮೆಣಸಿನಕಾಯಿ ಪೇಸ್ಟ್ ಅರ್ಧ ಚಮಚ, ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು ತುರಿದ ಹಸಿ ಶುಂಠಿ ಸ್ವಲ್ಪ, ಹಸಿಮೆಣಸಿನಕಾಯಿ ಪೇಸ್ಟ್

ರೆಡಿ ಮಾಡಿಟ್ಟುಕೊಂಡು ಫಲಹಾರ ಸೇವಿಸುವ 5 ನಿಮಿಷದ ಮೊದಲು ಎಲ್ಲವನ್ನೂ ಒಂದು ಬಟ್ಟಲಿಗೆ ಹಾಕಿ ತಾಜಾ ಹಸಿರು ದ್ರಾಕ್ಷಿ ಮತ್ತು ದಾಳಿಂಬೆ ಬೀಜಗಳನ್ನು ಹಾಕಿ ಕಲೆಸಿ ಸ್ವೀಕರಿಸಬೇಕು. ಏಕೆಂದರೆ ಭತ್ತದ ಅರಳು ಬೇಗ ಮೆತ್ತಗಾಗುತ್ತದೆ.

**


ಬೇಲದ ಹಣ್ಣಿನ ಹಲ್ವ/ಬರ್ಫಿ
ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ
:ದೊಡ್ಡ ಹಣ್ಣಾಗಿರುವ ಬೇಲದ ಹಣ್ಣಿನ ತಿರುಳು(ನಾರು ಕಡ್ಡಿ ತೆಗೆದದ್ದು)ಒಂದು ಬಟ್ಟಲು, ಒಂದು ಬಟ್ಟಲು ಸಿಹಿ ಬೆಲ್ಲ, ಇವೆರಡನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕೊನೆಗೆ ಸ್ವಲ್ಪ ತಿನ್ನುವ ಸುಣ್ಣದ ಪುಡಿ ಮತ್ತು ಏಲಕ್ಕಿ ಪುಡಿ ಹಾಕಿ ಒಂದು ಸುತ್ತು ತಿರುಗಿಸಿ.ತುಪ್ಪ ಸವರಿದ ತಟ್ಟೆಗೆ ಅಥವಾ ಬೌಲ್‌ಗೆ ಈ ಮಿಶ್ರಣ ಹಾಕಿ ಮೇಲಿಂದ ತಟ್ಟಿ. ತುಪ್ಪದಲ್ಲಿ ಕರಿದ ಗೋಡಂಬಿ ಸಹ ಸೇರಿಸಿ. ಸ್ವಲ್ಪ ಸಮಯದ ನಂತರ ಚಾಕುವಿನಿಂದ ಬೇಕಾದ ಆಕಾರಕ್ಕೆ ಕತ್ತರಿಸಿ. ಚೌಕಾಕಾರವಾಗಿ ಪೀಸ್ ಬರಲಿಲ್ಲವೆಂದರೆ ಹಲ್ವ ತರಹ ಸಹ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT