ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ವಾಯುಮಾಲಿನ್ಯ; ಇರಲಿ ಎಚ್ಚರ

Last Updated 31 ಅಕ್ಟೋಬರ್ 2020, 19:47 IST
ಅಕ್ಷರ ಗಾತ್ರ

ವಾಯುಮಾಲಿನ್ಯಕ್ಕೂ ಕೊರೊನಾ ಸೋಂಕು ಹರಡುವಿಕೆಗೂ ಇರುವ ಸಂಬಂಧ ಕುರಿತು ಸಂಶೋಧನೆಗಳು ಆರಂಭವಾಗಿವೆ. ದೀಪಾವಳಿ ಸಮೀಪಿಸುತ್ತಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಉಂಟಾಗಿದೆ. ಈ ಕುರಿತು ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಹಾಗೂ ಕನ್ಸಲ್ಟೆಂಟ್ ಫಿಜಿಷಿಯನ್ ಡಾ.ಸಿ.ಆರ್.ವೆಂಕಟೇಶ್ ವಿವರ ನೀಡಿದ್ದಾರೆ.

ಜಾಗತಿಕವಾಗಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳಲ್ಲಿ ಶೇ 15ರಷ್ಟು ವಾಯುಮಾಲಿನ್ಯದ ಜತೆ ನಿಕಟ ಸಂಬಂಧ ಹೊಂದಿವೆ ಎಂದು ಕಾರ್ಡಿಯೊ ವ್ಯಾಸ್ಕುಲರ್ ಸಂಶೋಧನಾ ಮ್ಯಾಗಜಿನ್ (Cardiovascular Research) ವರದಿ ಮಾಡಿದೆ.

ಕೋವಿಡ್ ಹರಡುವಿಕೆಗೂ, ವಾಯುಮಾಲಿನ್ಯಕ್ಕೂ ಇರುವ ನಂಟನ್ನು ಕುರಿತು ಹೆಚ್ಚು ಆಳವಾದ ಸಂಶೋಧನೆಗಳು ಆರಂಭಗೊಂಡಿವೆ. ಇಟಲಿಯಲ್ಲಿ ಸಂಭವಿಸಿದ ಅತ್ಯಂತ ಹೆಚ್ಚಿನ ಕೋವಿಡ್ ಸಾವುಗಳಿಗೆ ವಾಯುಮಾಲಿನ್ಯವೂ ಪ್ರಮುಖ ಕಾರಣವಾಗಿರುವುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಹೀಗಾಗಿ, ಭಾರತದಲ್ಲಿ ವಿಶೇಷವಾಗಿ ದೀಪಾವಳಿ ಹೊತ್ತಿನಲ್ಲಿ ಸಾರ್ವಜನಿಕರು ನಿಗಾ ವಹಿಸಬೇಕಾದ ಅಗತ್ಯ ಇದೆ.

ಉಸಿರಾಡುವ ಗಾಳಿಯಲ್ಲಿ ವಿಷಾನಿಲಗಳು ಹಾಗೂ ಸೂಕ್ಷ್ಮಕಣಗಳು ಬೆರೆತರೆ ಅದನ್ನು ವಾಯುಮಾಲಿನ್ಯ ಎನ್ನಲಾಗುತ್ತದೆ. ಈ ಸೂಕ್ಷ್ಮಕಣಗಳು 300ಕ್ಕೂ ಅಧಿಕ ರಾಸಾಯನಿಕಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುತ್ತವೆ. ಈ ಸೂಕ್ಷ್ಮಕಣಗಳು, ಉಸಿರಾಟದ ಮೂಲಕ ನಮ್ಮ ಶ್ವಾಸಕೋಶವನ್ನು ಹೊಕ್ಕು ಉಸಿರಾಟ ಸಂಬಂಧಿ ತೊಂದರೆಗಳು ಹಾಗೂ ಹೃದ್ರೋಗವನ್ನು ಉಂಟು ಮಾಡುತ್ತವೆ. ಜತೆಗೆ, ಶ್ವಾಸಕೋಶದಲ್ಲಿ ಇದ್ದಿರಬಹುದಾದ ಬ್ಯಾಕ್ಟೀರಿಯಾ, ವೈರಸ್‌ಗಳನ್ನೂ ಹೊರಗೆ ಕೊಂಡೊಯ್ಯುತ್ತವೆ. ಕೋವಿಡ್ ರೋಗಿಗಳು ಕೆಮ್ಮಿದಾಗ, ಸೀನಿದಾಗ ಹೊರಬರುವ ಕೊರೊನಾ ವೈರಸ್‌ಗಳ ಹರಡುವಿಕೆಗೆ ಈ ಕಣಗಳು ಕಾರಣ.

ಈ ಸೂಕ್ಷ್ಮಕಣಗಳು ಶ್ವಾಸಕೋಶದ ಊತ ಮತ್ತು ದೇಹದಲ್ಲಿ ಅತಿರೇಕದ ಉರಿಯೂತಗಳನ್ನು ಉಂಟು ಮಾಡಿ ಕೊರೊನಾ ಲಕ್ಷಣಗಳನ್ನು ಇನ್ನಷ್ಟು ಉಲ್ಬಣಗೊಳಿಸಬಲ್ಲುವು.

ವಹಿಸಬೇಕಾದ ಎಚ್ಚರಿಕೆಗಳು

* ಮಾಸ್ಕ್ ಧರಿಸುವ ಮೂಲಕ ಇಂತಹ ಸೂಕ್ಷ್ಮಕಣಗಳನ್ನು ನಮ್ಮ ದೇಹ ಸೇರದಂತೆ ತಡೆಯಬಹುದು

* ವಾಯುಮಾಲಿನ್ಯ ತಡೆಗಟ್ಟುವ ಮೂಲಕ ಇಂತಹ ಸೂಕ್ಷ್ಮಕಣಗಳನ್ನು ಕಡಿಮೆ ಮಾಡಿದರೆ ಕೇವಲ ಕೊರೊನಾ ಸೋಂಕು ಮಾತ್ರವಲ್ಲ ವಾಯುಮಾಲಿನ್ಯದಿಂದ ಬರುವಂತಹ ಇತರೆ ಕಾಯಿಲೆಗಳನ್ನೂ ನಿಯಂತ್ರಿಸಬಹುದು

* ಅಸ್ತಮಾ ಹಾಗೂ ಉಸಿರಾಟದ ಸಂಬಂಧಿ ಕಾಯಿಲೆ ಇರುವವರು ದೀಪಾವಳಿಯ ಸಮಯದಲ್ಲಿ ಪಟಾಕಿ ಹೊಡೆಯುವ ಸ್ಥಳಗಳಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳಬೇಕು

* ಮಕ್ಕಳು, ಹೆಚ್ಚು ಮಾಲಿನ್ಯ ಉಂಟು ಮಾಡುವಂತಹ ಪಟಾಕಿ ಹೊಡೆಯಬಾರದು

* ಮಕ್ಕಳೂ ಸೇರಿದಂತೆ ಮಾಸ್ಕ್ ಹಾಕದೇ ಯಾರೂ ಯಾವುದೇ ಕಾರಣಕ್ಕೂ ಯಾರೂ ಹೊರಬರಬಾರದು‌

* ಕೊರೊನಾ ಸೋಂಕಿತರು ಸೋಂಕಿನಿಂದ ಮುಕ್ತರಾಗುವ ತನಕ ಹೊರಗೆ ಬರಲೇಬಾರದು

* ಉಸಿರಾಟದ ತೊಂದರೆ ಇರುವವರು, ವೈದ್ಯರ ಸಲಹೆ ಮೇರೆಗೆ ಔಷಧಗಳನ್ನು ನಿಯಮಿತವಾಗಿ ಸೇವಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT