ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೆ ಕುತ್ತು ಚೈನಾಸಾಲ್ಟ್‌– ಒಳನೋಟ ವರದಿಗೆ ಪ್ರತಿಕ್ರಿಯೆಗಳು

Last Updated 26 ಮಾರ್ಚ್ 2023, 15:59 IST
ಅಕ್ಷರ ಗಾತ್ರ

‘ಆರೋಗ್ಯಕ್ಕೆ ಕುತ್ತು ಚೈನಾಸಾಲ್ಟ್‌’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮಾರ್ಚ್‌ 26) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು’

ಹೋಟೆಲ್‌ಗಳಲ್ಲಿ ರುಚಿ ಹೆಚ್ಚಿಸುವುದಕ್ಕಾಗಿ ಆಹಾರದಲ್ಲಿ ಏನು ಮತ್ತು ಯಾವ ಪದಾರ್ಥಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಕಠಿಣ ಕಾನೂನು ರಚಿಸಬೇಕು. ಆರೋಗ್ಯ ನಿರೀಕ್ಷಕರು ಆಹಾರದ ಗುಣಮಟ್ಟದ ಪರಿಶೀಲಿಸಿ ಸ್ಪಷ್ಟ ಚಿತ್ರಣ ನೀಡಬೇಕು. ಸರ್ಕಾರದಿಂದ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು. ಆಹಾರದಲ್ಲಿ ಚೀನಾಸಾಲ್ಟ್‌ನಂತಹ ರುಚಿ ವರ್ಧಕ ಪದಾರ್ಥಗಳ ಬಳಕೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಯೇ ತಿಳಿಯುವುದಕ್ಕಿಂತ ಕಣ್ಣೋಟದಲ್ಲಿ, ವಾಸನೆಯ ಮೂಲಕ ಇನ್ನಾವುದೇ ಭೌತಿಕ ವಿಧಾನದ ಮೂಲಕ ಪರೀಕ್ಷೆ ಮಾಡುವ ತಂತ್ರಜ್ಞಾನ ಅಳವಡಿಕೆಯಾಗಬೇಕು. ಇಂತಹ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದು ಕಡಿಮೆ ಆಗಬೇಕು. ನಾವು ಕೂಡ ಹೋಟೆಲ್‌ಗಳಲ್ಲಿ ತಯಾರಿಸುವ ಫಾಸ್ಟ್‌ಫುಡ್ ಸೇವನೆ ಮಾಡುವುದಕ್ಕಿಂತ ಮನೆಯ ಆಹಾರವನ್ನು ಸೇವಿಸುವುದು ಉತ್ತಮ ನಾಲಿಗೆ ರುಚಿಗಿಂತ ದೇಹದ ಆರೋಗ್ಯ ಮುಖ್ಯ.

।ಮಾರುತಿ ಎಂ. ಹಾವೇರಿ

==

‘ನಿಧಾನವಿಷ ಚೈನಾಸಾಲ್ಟ್‌’

ನಮಗೆ ಗೊತ್ತಿಲ್ಲದೇ ನಾವೇ ಹಣಕೊಟ್ಟು ವಿಷ ಸೇವಿಸುವ ಪ್ರಕ್ರಿಯೆಯೇ ಈ ಚೈನಾಸಾಲ್ಟ್. ಇದೊಂದು ರೀತಿಯ ನಿಧಾನವಿಷ ಎಂದರೆ ತಪ್ಪಾಗಲಾರದು. ಇಂದು ಬಹುತೇಕ ಹೋಟೆಲ್‌ಗಳು ಇದನ್ನು ಅವಲಂಬಿಸಿವೆ. ಹಾಗೆಯೇ ಗ್ರಾಹಕರೂ ಕೂಡ ಇದರ ವ್ಯಸನಿಗಳಾಗಿದ್ದಾರೆ. ಇದನ್ನು ಹಾಕದೆ ತಯಾರಿಸಿದ ಖಾದ್ಯಕ್ಕೆ ಜನ ಕೂಡ ಮರುಳಾಗುವುದಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪದಾರ್ಥವನ್ನು ಬಳಸುವ ಹೋಟೆಲ್‌ಗಳಿಗೆ ದೊಡ್ಡಮಟ್ಟದ ದಂಡ ವಿಧಿಸಿ ಇದಕ್ಕೆ ಕಡಿವಾಣ ಹಾಕಬೇಕು. ಸಾರ್ವಜನಿಕರು ಸಹ ಮನೆಯ ಆಹಾರವನ್ನೇ ಸೇವಿಸಬೇಕು.

।ಶಂಕರಮೂರ್ತಿ,

ಎಂ.ಎಸ್ಸಿ ವಿದ್ಯಾರ್ಥಿ ದಾವಣಗೆರೆ ವಿವಿ

==

‘ಅಪಾಯಕಾರಿ ರುಚಿಕಾರಕಗಳನ್ನು ನಿಷೇಧಿಸಿ’

ಇತ್ತೀಚೆಗೆ ಆಹಾರ ಕಲಬೆರಕೆ ಮಿತಿಮೀರಿ ಹೋಗಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜತೆಗೆ ಜನರಲ್ಲಿ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಎಂಎಸ್‌ಜಿ ಎಗ್ಗಿಲ್ಲದೇ ಉಪಯೋಗಿಸಲಾಗುತ್ತಿದೆ. ಮದುವೆ ಸಮಾರಂಭಗಳಲ್ಲಂತೂ ಅಧಿಕವಾಗಿ ಉಪಯೋಗಲಾಗಿಸುತ್ತಿದೆ. ಮದುವೆಯಲ್ಲಿ ಊಟಮಾಡಿ ಹೊಟ್ಟೆ ಕೆಡಿಸಿಕೊಳ್ಳುವುದು ಬೇಡವೆಂದು ಬಹತೇಕರು ಮದುವೆ ಸಮಾರಂಭಗಳಲ್ಲಿ ಊಟ ಮಾಡುವುದನ್ನು ಕಡಿಮೆ ಮಾಡುತ್ತಿರುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ. ಈ ಹಿಂದೆ ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಎಂಎಸ್‌ಜಿಯನ್ನು ನಿಷೇಧ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ಸದನದಲ್ಲಿ ಹೇಳಿದ್ದರು. ಆದರೆ ಅದು ಜಾರಿಯಾಗಲೇ ಇಲ್ಲ. ಇನ್ನು ಮುಂದಾದರೂ ಸರ್ಕಾರ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ರುಚಿಕಾರಕಗಳನ್ನು ನಿಷೇಧಿಸಲಿ.

।ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT