ಹುಬ್ಬಳ್ಳಿ: ‘ಕೋವಿಡ್ ಬಾಧಿತರು ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಸುಟ್ಟ ಗಾಯಗಳಿಂದ ಬಳುತ್ತಿರುವವರಿಗೆ ಸೋಂಕು ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಈ ಬಗ್ಗೆ ವಿಶೇಷ ಕಾಳಜಿ ವಹಿಸಲೇಬೇಕು’ ಎನ್ನುತ್ತಾರೆ ಪ್ಲಾಸ್ಟಿಕ್ ಸರ್ಜನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ. ಶ್ರುತಿ ಪಾಂಡೆ.
‘ಸುಟ್ಟ ಗಾಯಗಳಿಂದ ಬಳುತ್ತಿರುವವರು, ಚರ್ಮದ ಸಮಸ್ಯೆ ಇರುವವರಿಗೆ ಸೋಂಕು ಬಹುಬೇಗ ತಗುಲುತ್ತದೆ. ಹೀಗಾಗಿ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಇಂಥವರಿಗೆ ಅವಶ್ಯ. ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಐಸೊಲೇಷನ್ನಲ್ಲಿ ಇದ್ದರೆ, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸುವಂಥ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕೋವಿಡ್ ಬರದಂತೆ ತಡೆಯಬಹುದು’ ಎಂಬುದು ಅವರ ಖಚಿತ ಮಾತು.
‘ಇಂಥ ರೋಗಿಗಳಿಗೆ ತೀವ್ರ ಉಸಿರಾಟದ ಸಮಸ್ಯೆಯೂ ಇರುತ್ತದೆ. ಕೊರೊನಾ ಸೋಂಕು ಶ್ವಾಸಕೋಶಕ್ಕೆ ನೇರ ಹಾನಿ ಮಾಡುವುದರಿಂದ ಸುಟ್ಟಗಾಯಗಳಿಂದ ಬಳಲುತ್ತಿರುವವರು ಮತ್ತಷ್ಟು ಗಂಭೀರ ಸಮಸ್ಯೆ ಎದುರಿಸುತ್ತಾರೆ. ಪ್ರಾಣಕ್ಕೆ ಅಪಾಯ ಸಹ ಸಂಭವಿಸಬಹುದು. ಹಾಗಾಗಿ ಕೋವಿಡ್ನಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಪಡೆಯಬೇಕು’
‘ನಮ್ಮ ಬಳಿ ಬರುವ ಎಲ್ಲಾ ರೋಗಿಗಳಿಗೆ ಮೊದಲು ಕೋವಿಡ್ ತಪಾಸಣೆ ಮಾಡಿಸುತ್ತೇವೆ. ಒಂದು ವೇಳೆ ಕೋವಿಡ್ ದೃಢಪಟ್ಟರೆ ಅಂಥವರನ್ನು ಪ್ರತ್ಯೇಕವಾಗಿರಿಸಿ, ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯ ದೇಹದಲ್ಲಿ ನೀರಿನಾಂಶ ಕಡಿಮೆ ಆಗುವುದರಿಂದ ಎಲ್ಲವನ್ನೂ ಲೆಕ್ಕಾಚಾರ ಮಾಡಿ ಹೈಡ್ರೋ ಥೆರಪಿ, ಫ್ಲುಯಿಡ್ ಥೆರಪಿ ಮಾಡಲಾಗುತ್ತದೆ. ಸುಟ್ಟ ಗಾಯಗಳಿಂದ ಬಳಲುತ್ತಿರುವವರು ಕೋವಿಡ್ ಪೀಡಿತರಾದಾಗ ಮೂರು ದಿನ ಅವರ ದೇಹಸ್ಥಿತಿ ಪರಿಶೀಲಿಸಿ, ಅಗತ್ಯ ಚಿಕಿತ್ಸೆ ನೀಡುತ್ತೇವೆ’.
* ಈ ಕಾಲದಲ್ಲಿ ಜಾಗರೂಕತೆಯೇ ಹೆಚ್ಚಿನ ಅಗತ್ಯ
* ಸುಟ್ಟಗಾಯಗಳಾದಲ್ಲಿ ಸೋಂಕಿಗೆ ಬಲುಬೇಗ ಈಡಾಗುವ ಸಾಧ್ಯತೆಗಳಿರುತ್ತವೆ
* ಈ ಸಂದರ್ಭದಲ್ಲಿ ಸಮನ್ವಯ ಚಿಕಿತ್ಸೆ ಅತ್ಯಗತ್ಯವಾಗುತ್ತದೆ
* ಯಾವುದೇ ಕಾರಣಕ್ಕೂ ಸುಟ್ಟಗಾಯಗಳಿರುವ ರೋಗಿಗಳಿಗೆ ಅತಿಹೆಚ್ಚು ಜಾಗರೂಕರಾಗಿ ನೋಡಿಕೊಳ್ಳಬೇಕಾಗುತ್ತದೆ
ಪಾಲಿಸಬೇಕಾದ ನಿಯಮಮಗಳು
* ಸುಟ್ಟ ಗಾಯಗಳನ್ನು ಅಥವಾ ಚರ್ಮದ ಸಮಸ್ಯೆ ಇರುವ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
* ಸೋಂಕಿಗೆ ಒಳಗಾಗದಂತೆ ಅಥವಾ ಒಳಗಾದ ಬಳಿಕ ಐಸೊಲೇಷನ್ ಆಗಬೇಕು
* ಪೌಷ್ಟಿಕ ಆಹಾರ ಸೇವನೆ, ಔಷಧೋಪಚಾರಕ್ಕೆ ಆದ್ಯತೆ ನೀಡಬೇಕು
* ಸೂಕ್ತ ಸಮಯದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.