ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತಿಯರಲ್ಲಿ ಖಿನ್ನತೆ: ಹೀಗಿರಲಿ ಆರೈಕೆ

Last Updated 30 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಗಳು ಹೆರಿಗೆ ನಂತರ ಖಿನ್ನತೆಗೆ (Postpartum Depression) ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೇ ವೇಳೆ ಹೆರಿಗೆ ನಂತರ ಬಾಣಂತಿಯರಲ್ಲಿ ಕಂಡುಬರುವ ಖಿನ್ನತೆ ವಿಷಯ ಸಾಕಷ್ಟು ಚರ್ಚೆಗೂ ಒಳಗಾಗಿತ್ತು.

ಸಾಮಾನ್ಯವಾಗಿ ಹೆರಿಗೆ ಆದ ನಂತರ ಬಹುತೇಕ ತಾಯಂದಿರು ಕೆಲಬಗೆಯ ನೇತ್ಯಾತ್ಮಕ ಭಾವನೆಗಳನ್ನು ಅನುಭವಿಸುತ್ತಾರೆ. ಇದೇ ಹೆರಿಗೆ ನಂತರದ ಖಿನ್ನತೆ. ಅದರಲ್ಲೂ ಮೊದಲನೇ ಹೆರಿಗೆಯ ನಂತರ ಇಂತಹ ಖಿನ್ನತೆ ಕಾಡುತ್ತದೆ. ಕೆಲವರು ಅಸಂತೃಪ್ತಿ ಹಾಗೂ ಬೇಸರದ ಭಾವಗಳನ್ನು ತೋರ್ಪಡಿಸುತ್ತಾರೆ.

ಮಗುವಿಗೆ ಜನ್ಮ ನೀಡಿದ ಬಳಿಕ ತೀವ್ರ ಸ್ವರೂಪದ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳು ತಾಯಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆಗ ಇಂತಹ ಬದಲಾವಣೆಗಳು, ಭಾವನೆಗಳು ಮತ್ತು ಸವಾಲುಗಳು ಸಹಜ. ನಿದ್ರಾಹೀನತೆ, ಕಾರಣವಿಲ್ಲದೇ ಆಗಾಗ್ಗೆ ಅಳುವುದು, ಖಿನ್ನ ಮನಸ್ಥಿತಿ, ನಿತ್ರಾಣ, ಉದ್ವೇಗ, ಆಹಾರ ಸೇವನಾ ಕ್ರಮದಲ್ಲಿ ಬದಲಾವಣೆ ಇವೇ ಮೊದಲಾದವು ಹೆರಿಗೆ ನಂತರದ ಖಿನ್ನತೆಯ ಕೆಲವು ಲಕ್ಷಣಗಳಾಗಿವೆ. ಇವು ಬಹುಕಾಲ ಇರುವುದಿಲ್ಲ. ಕೆಲವರು ಬೇಗನೇ ಇಂತಹ ಲಕ್ಷಣಗಳಿಂದ ಹೊರಬರುತ್ತಾರೆ. ಇನ್ನೂ ಕೆಲವರಿಗೆ ಇವುಗಳಿಂದ ಹೊರಬರಲು ಸ್ವಲ್ಪ ಸಮಯ ಹಿಡಿಯುತ್ತದೆ.

ಖಿನ್ನತೆ ಬಾಣಂತಿಯ ಭಾವನೆಗೆ, ಯೋಚನೆಗೆ ಹಾಗೂ ಕಾರ್ಯನಿರ್ವಹಣೆಗೆ ವಿರುದ್ಧವಾಗಿ ಪರಿಣಾಮ ಬೀರುವ ಕಾರ್ಯ ಮಾಡುತ್ತದೆ. ಮನಸ್ಸಿನ ಸ್ಥಿತಿಯನ್ನು ಸದಾ ದುಃಖ ಹಾಗೂ ಒಂಟಿತನದಿಂದ ಬಳಲುವಂತೆ ಮಾಡುತ್ತದೆ. ನಿಜವಾಗಿಯೂ ಯಾವುದೇ ಕೆಲಸದಲ್ಲಿ ಸಂತೋಷ ಅನುಭವಿಸುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ.

ಖಿನ್ನತೆಯ ಲಕ್ಷಣಗಳು
ಹೆರಿಗೆ ನಂತರ ಖಿನ್ನತೆಗೆ ಒಳಗಾಗುವವರು ಪದೇ ಪದೇ ಕಣ್ಣೀರು ಹಾಕುತ್ತಾರೆ ಅಥವಾ ದುಃಖಿಸುತ್ತಾರೆ; ಹೆಚ್ಚು ಕೋಪದಲ್ಲಿರುತ್ತಾರೆ; ಮನೆಯವರೊಂದಿಗೆ ಚಿಕ್ಕ- ಚಿಕ್ಕ ವಿಷಯಕ್ಕೆ ಕಿರಿ ಕಿರಿ ಮಾಡಿಕೊಳ್ಳುತ್ತಾರೆ; ಸದಾ ಅನಗತ್ಯವಾಗಿ ಒಂದಲ್ಲ ಒಂದು ಯೋಚನೆ ಮಾಡುತ್ತಿರುತ್ತಾರೆ; ಮೊದಲು ಊಟ ಬೇಕು ಎನ್ನುವುದು ಮತ್ತು ಊಟ ತಂದು ಕೊಟ್ಟರೆ ಈಗ ಬೇಡ ಆಗ ಬೇಡ ಎಂದು ತಿರಸ್ಕರಿಸುತ್ತಾರೆ; ಎಲ್ಲ ವಿಷಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು; ತಾವೊಬ್ಬರೇ ಏಕಾಂಗಿಯಾಗಿರಲು ಬಯಸುವುದು; ಏನೂ ಆಗದಿದ್ದರೂ ಏನೋ ಆಗುತ್ತದೆ ಭಯ ಪಡುವುದು ಮತ್ತು ಮಗುವಿಗೆ ಹಾಲು ಕೊಡಲು ನಿರಾಕರಿಸುತ್ತಾರೆ. ತಾಯಿಯಿಂದ ಅಗತ್ಯವಿರುವ ಕಾಳಜಿ ಮಗುವಿಗೆ ಸಿಗದೇ ಇದ್ದಾಗ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಊಟ ಮಾಡದೇ ತಾಯಿ ಎದೆ ಹಾಲು ಕಡಿಮೆ ಆದಾಗ ಮಗುವಿನ ಆರೋಗ್ಯದ ಮೇಲೆ ಅದು ಪರಿಣಾಮ ಬೀರಬಹುದು. ಏಕೆಂದರೆ ಹುಟ್ಟಿದ ಮೊದಲ ಕೆಲವು ತಿಂಗಳು ಮಗುವಿಗೆ ತಾಯಿಯ ಹಾಲೇ ಮುಖ್ಯ ಆಹಾರ.

ಹೀಗಿರಲಿ ಆರೈಕೆ
ಇಂತಹ ಸೂಕ್ಷ್ಮ ಸಮಯದಲ್ಲಿ ಬಾಣಂತಿ ಮತ್ತು ಮಗುವನ್ನು ಮನೆಯಲ್ಲಿ ನೋಡಿಕೊಳ್ಳುವವರ ಪಾತ್ರ ಬಹಳ ಪ್ರಮುಖವಾಗುತ್ತದೆ. ಬಾಣಂತಿಯ ತಾಯಿ, ಗಂಡ ಅಥವಾ ಹತ್ತಿರದಲ್ಲಿ ಯಾರು ಆಕೆಯ ಆರೈಕೆ ಮಾಡುತ್ತಾರೋ ಅವರು ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಕಾಳಜಿವಹಿಸಬೇಕು.

ಆಕೆಯೊಡನೆ ಮುಕ್ತವಾಗಿ ಮಾತಾಡಿ ಧೈರ್ಯ ತುಂಬಬೇಕು. ಆಕೆ ಕೋಪ ಮಾಡಿಕೊಂಡರೆ ಸಹನಶೀಲರಾಗಿ ನಡೆದುಕೊಳ್ಳಬೇಕು. ಆಕೆಯ ಲಕ್ಷಣಗಳು ಗಂಭೀರವಾಗಿದ್ದರೆ ವೈದ್ಯರ/ಮನೋವೈದ್ಯರ ಬಳಿ ಕರೆದೊಯ್ಯಬೇಕು. ಚಿಕಿತ್ಸೆ/ಆಪ್ತ ಸಲಹೆ ಕೊಡಿಸಬೇಕು. ಬಾಣಂತಿಯ ಜೊತೆಗೆ ಸದಾ ಇರಬೇಕು. ಆಕೆಯನ್ನು ಒಂಟಿಯಾಗಿ ಇರಲು ಬಿಡಬಾರದು. ಖಿನ್ನತೆಗೆ ಶಮನಕಾರಿಗಳು ಹಾಗೂ ಇತರೆ ಔಷಧಿಗಳನ್ನು ಈ ಸಮಸ್ಯೆ ನಿವಾರಣೆಗೆಸೂಚಿಸ ಲಾಗುತ್ತದೆ.

ಆಯುರ್ವೇದದಲ್ಲೂ ಪರಿಹಾರ
ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯ ಇದೆ. ಬ್ರಾಹ್ಮಿ, ಜ್ಯೋತಿಷ್ಮತಿ, ಅಶ್ವಗಂಧ, ಶತಾವರಿ ಔಷಧಿಗಳ ಜೊತೆಗೆ ಆಹಾರದಲ್ಲಿ ಒಂದೆಲಗ, ನೀರು ಬ್ರಾಹ್ಮಿ, ಚಕ್ರಮುನಿ ಸೊಪ್ಪುಗಳಿಂದ ತಯಾರಿಸಿದ ಸಾರು, ತಂಬುಳಿ, ಪಲ್ಯಗಳ ಸೇವನೆಯಿಂದ ಹಿತವಾಗುತ್ತದೆ. ಪಂಚಕರ್ಮ ಚಿಕಿತ್ಸೆಯಲ್ಲಿ ಶಿರೋಧಾರಾ, ನಸ್ಯ ಚಿಕಿತ್ಸೆ, ಶಿರೋಪಿಚು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಮನಸ್ಸಿಗೆ ನೆಮ್ಮದಿ ಉಂಟುಮಾಡುತ್ತವೆ.

ಹೀಗೆ ಸೂಕ್ತ ಔಷಧೋಪಚಾರ, ಆಪ್ತ ಸಲಹೆ ಮತ್ತು ಮನೆಯವರ ಪ್ರೀತಿ ಮತ್ತು ಆರೈಕೆಗಳಿಂದ ಬಾಣಂತಿ ಹೆರಿಗೆ ನಂತರ ಉಂಟಾಗುವ ಖಿನ್ನತೆಯಿಂದ ಬಹುಬೇಗ ಹೊರಬರಬಹುದು. ಮಗುವಿನ ಲಾಲನೆಪಾಲನೆಯಲ್ಲಿ ದೃಷ್ಟಿ ಹರಿಸಬಹುದು.

(ಲೇಖಕರು ಆಯುರ್ವೇದ ವೈದ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT