ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹದಿಂದ ದೃಷ್ಟಿಗೆ ಆಪತ್ತು

Last Updated 27 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಆರೋಗ್ಯ ವಿಶ್ಲೇಷಕರ ಪ್ರಕಾರ ಮಧುಮೇಹದಿಂದ ಬಳಲುತ್ತಿರುವ ಭಾರತೀಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಿವಿಧ ಕಾರಣಗಳಿಗೆ ಈ ಕಾಯಿಲೆಯನ್ನು ಪತ್ತೆ ಹಚ್ಚಲಾಗದ ಸ್ಥಿತಿಯೂ ಇರುವುದರಿಂದ ಭಾರತಕ್ಕೆ ಮಧುಮೇಹಿಗಳ ರಾಜಧಾನಿ ಎಂಬ ಹಣೆಪಟ್ಟಿಯೂ ಬಿದ್ದಿದೆ. ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಲ್ಲದೇ ಇದ್ದರೆ ದೇಹದ ಪ್ರಮುಖ ಅಂಗಗಳಾದ ಕಣ್ಣು, ಕಿಡ್ನಿ, ಹೃದಯವು ಹಾಳಾಗುವ ಸಾಧ್ಯತೆ ಹೆಚ್ಚು ಎಂಬ ಮಾಹಿತಿ ಕಡಿಮೆ ಜನರಿಗೆ ಗೊತ್ತಿದೆ.ಇತರರಿಗೆ ಹೋಲಿಸಿದರೆ ಮಧುಮೇಹಿಗಳು ಅಂಧರಾಗುವ ಸಾಧ್ಯತೆ ಶೇ 25ರಷ್ಟು ಹೆಚ್ಚಿರುತ್ತದೆ. ಮಧುಮೇಹಕ್ಕೆ ತುತ್ತಾಗಲು ಆನುವಂಶೀಯತೆಯೂ ಒಂದು ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳೋಣ.

ದೀರ್ಘಕಾಲದ ಮಧುಮೇಹದಿಂದ ಕಣ್ಣು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಅರಿವು ಹೊಂದುವುದು ಅಗತ್ಯ. ನಿರಂತರ ಕಣ್ಣಿನ ತಪಾಸಣೆಯಿಂದ ಮಧುಮೇಹದಿಂದ ಉಂಟಾಗುವ ಕುರುಡುತನವನ್ನು ತಪ್ಪಿಸಬಹುದು.

ಏನಿದು ಮಧುಮೇಹ ರೆಟಿನೋಪಥಿ: ಮಧುಮೇಹದಿಂದ ಅಕ್ಷಿಪಟ ಹಾನಿಗೊಳ ಗಾಗುವುದನ್ನೇ ಮಧುಮೇಹದ ರೆಟಿನೋಪಥಿ ಎಂದು ಕರೆಯಲಾಗುತ್ತದೆ. ಇದರಲ್ಲಿಯೂ ಆರಂಭಿಕ, ಮಧ್ಯಮ ಮತ್ತು ಅಂತಿಮ ಹಂತಗಳಿರುತ್ತವೆ. ಅಂತಿಮ ಹಂತದಲ್ಲಿ ರೆಟಿನೋಪಥಿ ಇದ್ದರೆ ಪೂರ್ಣವಾಗಿ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆರಂಭ ಅಥವಾ ಮಧ್ಯಮ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು.

ತಡೆಗಟ್ಟಲು ಉಪಾಯಗಳು: ಮಧುಮೇಹದ ಸರಿಯಾದ ನಿರ್ವಹಣೆ, ಸಕ್ಕರೆ ಪ್ರಮಾಣದ ನಿಯಂತ್ರಣದಿಂದ ರೆಟಿನೋಪಥಿಯಿಂದಾಗುವ ದೃಷ್ಟಿಹೀನತೆಯನ್ನು ತಪ್ಪಿಸಬಹುದು.ಮಧುಮೇಹಕ್ಕಾಗಿ ನೀಡಿದ ಔಷಧಿಯನ್ನು ಸರಿಯಾದ ಪ್ರಮಾಣದಲ್ಲಿ, ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುವುದು ಅವಶ್ಯಕ. ನಿಗದಿತ ಪ್ರಮಾಣದಲ್ಲಿ ಆಹಾರ ಸೇವನೆ, ಪ್ರತಿದಿನ ಅಥವಾ ವಾರಕ್ಕೊಮ್ಮೆ ರಕ್ತದ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುವುದು, ನಿತ್ಯ ವ್ಯಾಯಾಮ ಪದ್ಧತಿಯನ್ನು ಅಳವಡಿಸಿಕೊಳ್ಳುವುದು, ತೂಕ ನಿರ್ವಹಣೆ, ರಕ್ತದ ಒತ್ತಡ ನಿಯಂತ್ರಿಸುವುದು, ನಿಯಮಿತವಾಗಿ ಕಣ್ಣಿನ ಪರೀಕ್ಷೆ ಜತೆಗೆ ಧೂಮಪಾನ ಮತ್ತು ಮದ್ಯಪಾನದಂತಹ ಚಟಗಳಿಂದ ದೂರವಿರಬೇಕು.

ಲಭ್ಯವಿರುವ ಚಿಕಿತ್ಸಾ ವಿಧಾನಗಳು: ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆ, ರಕ್ತದಲ್ಲಿನ ಗ್ಲುಕೋಸ್‌ ಪ್ರಮಾಣದ ನಿರ್ವಹಣೆಯಿಂದ ರೆಟಿನೋಪಥಿಯನ್ನು ಸರಿಪಡಿಸಬಹುದು. ಅಗತ್ಯ ಬಿದ್ದರೆ ಲೇಸರ್‌ ಚಿಕಿತ್ಸೆ, ಕಣ್ಣಿನ ಒಳಭಾಗದಲ್ಲಿನ ಜೆಲ್ಲಿಯಂತಹ ವಸ್ತುವನ್ನು ಹೊರತೆಗೆಯುವ ವಿಟ್ರೆಕ್ಟಮಿ ಚಿಕಿತ್ಸೆ ಮಾಡಬಹುದು. ಅಕ್ಷಿಪಟಲದ ಊತಕ್ಕೆ ಸ್ಟಿರಾಯ್ಡ್‌ ಅಥವಾ ರಕ್ತನಾಳ ಬೆಳವಣಿಗೆಗೆ ಪ್ರತಿರೋಧಕ ಔಷಧಿಗಳ ಅಗತ್ಯವಿರುತ್ತದೆ.

lಮಧುಮೇಹವಿರುವ ವ್ಯಕ್ತಿ ಯಾವಾಗ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು?

ಯಾವುದೇ ವ್ಯಕ್ತಿಗೆ ಮಧುಮೇಹ ಇದೆ ಎಂದು ತಿಳಿದ ಕೂಡಲೇ ಮತ್ತು ಅದರ ನಂತರ ವೈದ್ಯರ ಸಲಹೆಯ ಮೇರೆಗೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಣ್ಣಿನಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದರೆ ತಕ್ಷಣ ಚಿಕಿತ್ಸೆ ನೀಡಬಹುದು.

lಹೆಚ್ಚಿನ ಮಾಹಿತಿ ಹಾಗೂ ವೈದ್ಯರ ಭೇಟಿಗೆ ಪೂರ್ವ ನಿಗದಿಗಾಗಿ

ನಾರಾಯಣ ನೇತ್ರಾಲಯ ಸಂಪರ್ಕ ಸಂಖ್ಯೆ:

9538885910 / 080 66121687

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT