ಕೊರೊನಾ ಸೋಂಕು 400 ವರ್ಷ ಮೊದಲಿನಿಂದಲೂ ಇತ್ತು. ‘ಖಂಡಗುತ್ತಿಗೆ ಜ್ವರ’ ಎಂಬ ಹೆಸರಿನ ಕಾಯಿಲೆಯಾಗಿ ಇದನ್ನು ಗುರುತಿಸುತ್ತಿದ್ದರು ಎಂಬುದು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ದಾಖಲಾಗಿದೆ.
ಜ್ವರ, ನೆಗಡಿ, ಕೆಮ್ಮು ಲಕ್ಷಣಗಳನ್ನೊಳಗೊಂಡಿರುವ ಈ ಕಾಯಿಲೆಗೆ ನಮ್ಮ ಸುತ್ತಮುತ್ತಲು ಸಿಗುವ ಔಷಧೀಯ ಸಸ್ಯಗಳನ್ನು ಬಳಸಿ ಔಷಧ ಸಿದ್ಧಪಡಿಸಿಕೊಳ್ಳಬಹುದಾಗಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಇವು ಅತ್ಯಂತ ಸಹಕಾರಿ ಮತ್ತು ಅಷ್ಟೇ ಪರಿಣಾಮಕಾರಿ ಎಂಬುದು ಅನೇಕರ ಅನುಭವದಿಂದ ದೃಢಪಟ್ಟಿದೆ.
ಪಾರಿಜಾತ ಸಸ್ಯದ ಎಲೆ,ಅಮೃತ ಬಳ್ಳಿ, ಕಟುಕಿ ಇವುಗಳನ್ನು ಬಳಸಿ ಸಿದ್ಧಪಡಿಸಿಕೊಳ್ಳುವ ಔಷಧ ಆರೋಗ್ಯ ರಕ್ಷಣೆಗೆ ಸಹಕಾರಿ. ಈ ಔಷಧಗಳ ತಯಾರಿಕೆ, ಬಳಕೆ ಕುರಿತು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಸ್ತಾರ ಮಾಹಿತಿ ಇದೆ.
ಈ ಹಿಂದೆ ಡೆಂಗಿ ಜ್ವರ ಬಂದಾಗ ಔಷಧ ಇಲ್ಲದೇ ಪರದಾಡುವ ಸಂದರ್ಭದಲ್ಲಿ ಪಾರಂಪರಿಕ ವೈದ್ಯರ ಕೊಡುಗೆಯಾದ ಪಪ್ಪಾಯ ಎಲೆಯ ರಸದಿಂದ ಡೆಂಗಿ ಗುಣಮುಖಪಡಿಸಲು ಸಾಧ್ಯವಾದ ಉದಾಹರಣೆ ಕಣ್ಣೆದುರು ಇದೆ. ಪಪ್ಪಾಯ ಎಲೆಗಳಿಂದ ಸಿದ್ಧಪಡಿಸಿದ ಮಾತ್ರೆ, ಔಷಧಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.
ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಪಾರಂಪರಿಕ ವೈದ್ಯರನ್ನು ಸರ್ಕಾರ ಗಣನೆಗೆ ಪಡೆದರೆ ಮುಳುಗುವ ವ್ಯಕ್ತಿಗೆ ಹುಲ್ಲುಕಡ್ಡಿ ಆಸರೆಯಾದಂತೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಉಸಿರಾಟದ ಸಮಸ್ಯೆ ಎದುರಾದಾಗ ಹಿಂದಿನ ಕಾಲದಲ್ಲಿ ಕೆಲವು ಗಿಡಮೂಲಿಕೆಗಳ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆ ದೂರವಾಗುತ್ತಿತ್ತು ಎಂಬ ನಂಬಿಕೆ ಇದೆ. ಅದನ್ನು ಈಗಲೂ ಕೆಲ ಪಾರಂಪರಿಕ ವೈದ್ಯರು ಮುಂದುವರೆಸಿದ್ದು ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಈ ಎಲ್ಲಾ ಅನುಭವವನ್ನು ಬಳಸಿ ಔಷಧ ನೀಡಿ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಪಾರಂಪರಿಕ ವೈದ್ಯ ಸಮೂಹ ಶ್ರಮಿಸುತ್ತಿದೆ.
–ವಿಶ್ವನಾಥ ಹೆಗಡೆ,ಪಾರಂಪರಿಕ ವೈದ್ಯ ಶಿರಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.