ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧೀಯ ಗುಣಗಳ ಹಾಲವಾಣ

Published 9 ಜುಲೈ 2023, 23:35 IST
Last Updated 9 ಜುಲೈ 2023, 23:35 IST
ಅಕ್ಷರ ಗಾತ್ರ

ಗೇಣುದ್ದನೆಯ, ಮೇಲ್ಮೈನಲ್ಲಿ ಗಂಟುಗಳಂತೆ ಕಾಣುವ ಸಿಪ್ಪೆ ಬಿಡಿಸಿ, ಅದರೊಳಗಿದ್ದ ಹಸಿ ಬೀಜ ತೆಗೆದು, ಬೀಜದ ಹೊಟ್ಟೆ ಕೊರೆದು ರಂಧ್ರ ಮಾಡಿ, ಬೆರಳಿಗೆ ಉಂಗುರ ಮಾಡಿಕೊಳ್ಳುತ್ತಿದ್ದು ನೆನಪಿದೆಯಾ..!

ಅದೇ ಬೀಜ ಒಣಗಿದ ಮೇಲೆ, ಅದನ್ನು ಕಲ್ಲಿಗೆ ಉಜ್ಜಿ ಪಕ್ಕದಲ್ಲಿದ್ದ ಗೆಳೆಯರ ಮೈಗೆ ತಾಗಿಸಿ, ಚುರುಗುಟ್ಟುವಂತಹ ಬಿಸಿ ತಾಕಿ ಅವರು ‘ಹಾ..’ ಎಂದಾಗ.. ಫುಲ್ ಖುಷಿಪಟ್ಟಿದ್ದು.. ನೆನಪಾಯ್ತಾ !

ಇಂಥ ಹಾಲವಾಣದ ಮರದ ಕಥೆ ಬಾಲ್ಯದ ಆಟಕ್ಕಷ್ಟೇ ಸೀಮಿತವಾಗಿಲ್ಲ. ಆ ಮರದ ಬೀಜಗಳಿಗೆ ಔಷಧೀಯ ಗುಣವಿದೆ. ಅದನ್ನು ಭಾರತೀಯ ಹವಳದ ಮರ (ಇಂಡಿಯನ್ ಕೊರಲ್ ಟ್ರಿ) ಎಂದು ಕರೆಯುತ್ತಾರೆ. ಇದು ವೈಜ್ಞಾನಿಕವಾಗಿ ರ‍್ರಿತ್ರೇನ್‌ ಕುಲಕ್ಕೆ ಸೇರಿದ್ದು. ಇದರಲ್ಲಿ ಸುಮಾರು 110 ಪ್ರಭೇದಗಳನ್ನು ಗುರುತಿಸಲಾಗಿದೆ. ಬಟಾಣಿ ಗಿಡದ ಕುಟುಂಬಕ್ಕೆ ಸೇರಿದ ಪ್ರಭೇದವಿದು. ದಕ್ಷಿಣ ಭಾರತದಲ್ಲಿರುವ ಹೂ ಬಿಡುವ ಸ್ಥಳೀಯ ಮರಗಳಲ್ಲೊಂದು. ಎಲೆ ಉದುರುವ ಕಾಡುಗಳಲ್ಲಿನ ಮರವಿದು.

ಗುಣಲಕ್ಷಣಗಳು: ಇದು ಮಧ್ಯಮ ಗಾತ್ರದ ಮರ. ಐದರಿಂದ ಹದಿನೈದು ಮೀಟರ್‌ವರೆಗೆ ವೇಗವಾಗಿ ಬೆಳೆಯುತ್ತದೆ. ಕೊಂಬೆಗಳು ಹತ್ತಿರದಲ್ಲಿರುತ್ತವೆ. ಕಾಂಡದ ಮೇಲೆ ನಯವಾದ ತೊಗಟೆಯಿದ್ದರೂ ಮುಳ್ಳುಗಳಿರುತ್ತವೆ. ಮೂರು ಪತ್ರೆಗಳಿರುವ ಎಲೆಗಳಲ್ಲಿ ತೊಟ್ಟು 15 ಸೆಂಮೀ ಇದ್ದು ಪತ್ರೆ ಏಳರಿಂದ 12 ಸೆಂ.ಮೀ. ಅಗಲವಿರುತ್ತದೆ. ಪತ್ರೆಗಳು ಮೊಟ್ಟೆಯಾಕಾರದಲ್ಲಿರುತ್ತವೆ.

ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಹೂ ಬಿಡುವ ಕಾಲ. ಸುಮಾರು ಎರಡು ತಿಂಗಳವರೆಗೆ ಹೂಗಳು ಮರದಲ್ಲಿರುತ್ತವೆ. ಈ ಸಮಯದಲ್ಲಿ ಮರದಲ್ಲಿ ಎಲೆಗಳೇ ಇರುವುದಿಲ್ಲ. ಕೊಂಬೆಗಳ ತುದಿಯಲ್ಲಿ ಆಕರ್ಷಕವಾದ ಹೂಗಳು 10 ರಿಂದ 20 ಸೆಂ.ಮೀ. ಗಾತ್ರವಿದ್ದು ಗೊಂಚಲಿನಲ್ಲಿ ಬಿಡುತ್ತವೆ. ಆಕರ್ಷಕ ಢಾಳ ಕೆಂಪು ಅಥವಾ ಹವಳ ಕೆಂಪಿನ ಸುಂದರ ಹೂವುಗಳು. ತುದಿ ಚೂಪಾಗಿರುವ ಹಣ್ಣುಗಳು ಏಳರಿಂದ 15 ಸೆಂಮೀಗಳಷ್ಟು ಉದ್ದವಿರುತ್ತವೆ (ಚಿತ್ರದ ಬಲಭಾಗದಲ್ಲಿವೆ). ಮೊದಲಿಗೆ ಕಾಯಿ ಹಸಿರಾಗಿದ್ದು ಕ್ರಮೇಣ ಕಡು-ಕಂದು ಬಣ್ಣದ್ದ್ಪಾಗುತ್ತದೆ. ಬೀಜಗಳು ಮೂತ್ರಕೋಶದ ಆಕಾರದಲ್ಲಿರುತ್ತವೆ. ಒಂದು ಹಣ್ಣಿನಲ್ಲಿ 12 ರ ತನಕ ಬೀಜಗಳಿರುತ್ತವೆ.

ಉಪಯೋಗಗಳು: ಉಪಯುಕ್ತ ನೆರಳಿನ ಮರ. ಹೂಗಳ ಅಂದಕ್ಕಾಗಿ ಈ ಮರವನ್ನು ಬೆಳೆಸಲಾಗುತ್ತದೆ. ಹೊಸ ಎಲೆಗಳನ್ನು ಪಲ್ಯಕ್ಕಾಗಿ ಉಪಯೋಗಿಸುತ್ತಾರೆ. ಎಲೆಗಳು ಚಳಿಗಾಲದವರೆಗೆ ಇರುತ್ತವೆ. ಆಯುರ್ವೇದ ಮತ್ತು ಸಿದ್ಧ ಔಷಧಿಗಳಲ್ಲಿ ಜ್ವರ ಮತ್ತು ಕರುಳು ಹುಳು ನಿವಾರಕವಾಗಿ ಬಳಕೆಯಲ್ಲಿದೆ. ಅಸ್ತಮಾ, ಕೆಮ್ಮು, ಋತುಚಕ್ರದ ಅಸ್ವಸ್ಥತೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಸಸ್ಯದಲ್ಲಿರುವ ಆಲ್ಕಲೈಡ್ ಮತ್ತು ಫ್ಲೆವೊನೈಡ್ ಎಂಬ ರಾಸಾಯನಿಕಗಳನ್ನು ಉರಿಯೂತ ನಿವಾರಣೆ ಮತ್ತು ಪ್ರತಿಜೀವಕಗಳಾಗಿಯೂ ಉಪಯೋಗಿಸುವರು.

ಹಾಲವಾಣ ಮರಗಳನ್ನು ಕಾಫಿ ಮತ್ತು ಚಹಾ ತೋಟಗಳಲ್ಲಿ ನೆರಳಿಗಾಗಿ ಬೆಳೆಸುತ್ತಾರೆ. ವಿಳ್ಯೆದೆಲೆ ಮತ್ತಿತರ ಬಳ್ಳಿಗಳಿಗೆ ಆಶ್ರಯ ಮರವಾಗಿಯೂ ಬಳಸಲಾಗುವುದು. ಮರದ ಕಾಂಡದಿಂದ ಗೊಂಬೆಗಳನ್ನು ತಯಾರಿಸಲಾಗುತ್ತದೆ. ತೊಗರಿ, ಹೆಸರು ಮುಂತಾದ ದ್ವಿದಳ ಸಸ್ಯಗಳ ಕುಟುಂಬಕ್ಕೆ ಸೇರಿದ ಮರವಾದ್ದರಿಂದ ಬೇರಿನಲ್ಲಿ ಸಾರಜನಕ ಹಿಡಿದಿಡುವ ಬ್ಯಾಕ್ಟಿರಿಯಾಗಳಿಗೆ ಆಶ್ರಯತಾಣ. ಹಾಗಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿ. ಬೀಜಗಳಿಂದ ಅಥವಾ ಕೊಂಬೆಗಳಿಂದ ಗಿಡವನ್ನು ಬೆಳೆಸಬಹುದು.

ಭಾರತದಲ್ಲಿ ಮಾತ್ರ ಕಾಣಸಿಗುವ ಸ್ಥಳೀಯ ಪ್ರಭೇದವಾಗಿದ್ದು ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್ ದ್ವೀಪ ಸಮೂಹಗಳ ಕಾಡುಗಳಲ್ಲಿ ಬೆಳೆಯುತ್ತದೆ. ದೇಶದ ಅಭಿವೃದ್ಧಿ ಅಲ್ಲಿರುವ ನೈಸರ್ಗಿಕ ಸಂಪತ್ತು ಮತ್ತು ವಾತಾವರಣವನ್ನು ಅವಲಂಬಿಸಿದೆ. ಬಣ್ಣದ ಹೂಗಳಿರುವ ಮರಗಳು ಎಲ್ಲರ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುತ್ತವೆ. ಜೊತೆಗೆ ಆರೋಗ್ಯಕರ ಪರಿಸರ ನಿರ್ಮಾಣವಾಗುವುದು. ಜೈವಿಕ ಅಲಂಕಾರ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಾಗ ಸ್ಥಳೀಯ ಪ್ರಭೇದಗಳಿಗೆ ಆದ್ಯತೆ ನೀಡಬೇಕೆಂದು ಪರಿಸರ ತಜ್ಞರ ಅಭಿಪ್ರಾಯ. ಹಾಲವಾಣದಂತಹ ಮರಗಳು ಇದಕ್ಕೆ ಸೂಕ್ತವಾದದ್ದು. ಇಂತಹ ಬಹುಪಯೋಗಿ ಸಸ್ಯಗಳು ಹೆಚ್ಚಾದರೆ ಒಳ್ಳೆಯದಲ್ಲವೇ?

(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT