ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಯಾರ‍್ರೀ ‍ಪೇಷಂಟ್‌; ಎಲದಾರ್‍ರೀ...

ಕೈ ಹಿಡಿದಳು ಗಾಯತ್ರಿ –3 (ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)
Last Updated 28 ಫೆಬ್ರುವರಿ 2021, 10:31 IST
ಅಕ್ಷರ ಗಾತ್ರ

ಕಳೆದ ವಾರ ನನ್ನ ಮೆಮೊಗ್ರಾಂ ಮತ್ತು ಸ್ಕ್ಯಾನಿಂಗ್‌ ಕಥೆ ಓದಿ ಅಲ್ಲಲ್ಲಿ ನಗು ಉಕ್ಕಿರಬಹುದು. ಈ ವಾರ ಅದಕ್ಕೂ ಫನ್ನಿ ಅನ್ನೋವಷ್ಟು ಒಂದಷ್ಟು ಸೀನ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಬರೋಬ್ಬರಿ 10 ತಿಂಗಳು ಪ್ರಶ್ನಾರ್ಥಕವಾಗಿ ನನ್ನನ್ನು ಇನ್ನಿಲ್ಲವೆಂಬಷ್ಟು ಕಾಡಿದ ಕ್ಯಾನ್ಸರ್‌ ನನಗಿದೆ ಎಂಬ ತೀರ್ಪನ್ನು ಸ್ಕ್ಯಾನಿಂಗ್‌ ಸೆಂಟರ್‌ ಕೊಟ್ಟಿತ್ತು. ಒಂದಲ್ಲ; ನನ್ನೆರಡೂ ಸ್ತನಗಳಲ್ಲಿ ಕ್ಯಾನ್ಸರ್‌ ಗಂಟುಗಳು ಇರುವುದು ವೈದ್ಯಕೀಯವಾಗಿ ದೃಢಪಟ್ಟಿತ್ತು. ಕ್ಯಾನ್ಸರ್‌ ಪಾಸಿಟಿವ್‌ ರಿಪೋರ್ಟ್‌ ಅನ್ನು ಹೆಚ್ಚಿನವರಿಗೆ ಅರಗಿಸಿಕೊಳ್ಳುವುದು ಕಷ್ಟ. ಆದರೆ ನಾನು ಆ ‘ಕ್ಯಾನ್ಸರ್ ಪಾಸಿಟಿವ್‌’ ರಿಪೋರ್ಟ್‌ ಅನ್ನು ‘ಪಾಸಿಟಿವ್‌’ ಆಗಿ ಸ್ವೀಕರಿಸಿದೆ. ಆ ಸಂದರ್ಭದಲ್ಲಿ ನಾನಿಟ್ಟ ದಿಟ್ಟ ಹೆಜ್ಜೆ ನನ್ನನ್ನು ಧೈರ್ಯಗೆಡಲು ಬಿಡಲಿಲ್ಲ. ಬದಲಿಗೆ ಅಲ್ಲಿವರೆಗೂ ಮನದ ಮೂಲೆಯಲ್ಲಿ ಜಟಿಲ ಕೊರಗಾಗಿ ಉಳಿದಿದ್ದ ಆತಂಕ ಸಂಪೂರ್ಣ ಮರೆಯಾಗಿತ್ತು. ಮನಸ್ಸು ಒಂದಷ್ಟು ನಿರಾಳವಾಗಿತ್ತು. ಎಸ್‌ಡಿಎಂ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್‌ಗೆ ಅಡ್ಮಿಟ್‌ ಆಗಲು ನಿರ್ಧರಿಸಿದೆ.

ಅದುವರೆಗೂ ನಾನು ಕೆಲಸ ಮಾಡುವ ‘ಪ್ರಜಾವಾಣಿ’ ಕಚೇರಿಯಲ್ಲಿ ನನಗೆ ಕ್ಯಾನ್ಸರ್‌ ಒಕ್ಕರಿಸಿರುವ ಸುದ್ದಿ ಯಾರೊಬ್ಬರಿಗೂ ಗೊತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಾಗುವ ಮುನ್ನ ಕೈಯಲ್ಲಿ ಒಂದಷ್ಟು ಹಣ ಬೇಕಲ್ಲ, ಜೊತೆಗೆ ರಜೆ ಕೂಡ. ನಮ್ಮ ಆಫೀಸ್‌ನಲ್ಲಿ ಸ್ವ ಸಹಾಯ ಸಂಘದಲ್ಲಿ ನಾನೂ ಕೂಡ ಸದಸ್ಯೆ. ಸ್ವ ಸಹಾಯ ಸಂಘದಿಂದ ತುರ್ತು ಪರಿಸ್ಥಿತಿಯಲ್ಲಿ ₹75 ಸಾವಿರ ಪಡೆಯುವ ಅವಕಾಶವಿತ್ತು. ಸಂಘವನ್ನು ನಿರ್ವಹಿಸುತ್ತಿದ್ದ ಹಿರಿಯ ಉಪಸಂಪಾದಕರಾಗಿದ್ದ ಶ್ರೀಪಾದ ಜೋಶಿಯವರಿಗೆ ಬೆಳಿಗ್ಗೆ ಫೋನ್‌ ಮಾಡಿದೆ. ‘ಸರ್‌, 75ಸಾವಿರ ರೂಪಾಯಿ ಅರ್ಜೆಂಟ್‌ ಬೇಕಿತ್ತು’ ಅಂದೆ. ‘ಯಾಕೆ ಅಷ್ಟು ಅರ್ಜೆಂಟ್‌; ಅಂತದ್‌ ಏನಾಯ್ತು’ ಎಂದು ಅವರು ಕೇಳಿದರು. ನಾನು ಅವರ ಪ್ರಶ್ನೆಗೆ ಸಹಜವಾಗಿಯೇ, ‘ನಂಗೆ ಕ್ಯಾನ್ಸರ್‌ ಆಗಿದೆ ಸರ್‌. ಅರ್ಜೆಂಟ್‌ ಅಡ್ಮಿಟ್‌ ಆಗ್ಬೇಕಿದೆ’ ಎಂದೆ. ನಾನು ಹೇಳಿದ್ದು ಅವರಿಗೆ ನಂಬಲಾಗಲಿಲ್ಲವೋ ಅಥವಾ ಸರಿಯಾಗಿ ಕೇಳಲಿಲ್ಲವೋ ಗೊತ್ತಿಲ್ಲ. ಏನು ಏನು ಅಂಥ ಎರಡೆರಡುಬಾರಿ ಕೇಳಿದರು. ‘ಹೌದು ಸರ್‌, ಬ್ರೆಸ್ಟ್‌‌ ಕ್ಯಾನ್ಸರ್‌ ಪಾಸಿಟಿವ್‌ ಬಂತು. ಅದಕ್ಕೆ ಟ್ರೀಟ್‌ಮೆಂಟ್‌ಗೆ ನಾಳೆಯೇ ಆಸ್ಪತ್ರೆಗೆ ಅಡ್ಮಿಟ್‌ ಆಗ್ತಿದ್ದೇನೆ‘ ಎಂದೆ. ಆ ಕಡೆಯಿಂದ ತಕ್ಷಣಕ್ಕೆ ಮಾತೇ ಬರಲಿಲ್ಲ. ‘ಹೂಂ, ಸರಿ ಈಗಲೇ ಆಫೀಸ್‌ಗೆ ಬರ್ತೇನೆ’ ಎಂದರು.

ಚೆಕ್‌ಗೆ ಮತ್ತಿಬ್ಬರ ಸಹಿ ಬೇಕಿತ್ತು. ಅದನ್ನೆಲ್ಲ ಬೇಗ ಮುಗಿಸಿಕೊಂಡರು ಜೋಶಿ ಸರ್‌. ನಾನೂ ಆಫೀಸ್‌ಗೆ ಹೋದೆ. ಅಷ್ಟರಲ್ಲಾಗಲೇ ಜೋಶಿ ಸರ್‌, ಆಗ ನಮ್ಮ ಬ್ಯೂರೋ ಚೀಫ್‌ ಆಗಿದ್ದ ಎಂ.ನಾಗರಾಜ ಸರ್‌ ಅವರಿಗೆ ವಿಷಯ ತಿಳಿಸಿದ್ದರು. ನಾನು ಹೋಗಿ ಅವರ ಮುಂದೆ ಕೂರುತ್ತಲೇ ನನ್ನಿಂದ ಮಾತು ಹೊರಡದ ಸ್ಥಿತಿ. ‘ಯಾಕೆ ಕೃಷ್ಣಿ? ಜೋಶಿ ಹೇಳಿದ್ರು. ನಂಬ್ಲಿಕ್ಕೇ ಆಗ್ತಿಲ್ಲ’ ಅಂದ್ರು. ‘ಹೂಂ ಸರ್‌, ರಿಪೋರ್ಟ್‌ ಪಾಸಿಟಿವ್‌ ಬಂತು. ನಾಳೆಯೇ ಆಸ್ಪತ್ರೆಗೆ ಅಡ್ಮಿಟ್‌ ಆಗ್ತೇನೆ. ಒಂದಷ್ಟು ದಿನ ರಜೆ ಬೇಕಿತ್ತು’ ಎಂದೆ. ’ಸರಿ ನಿಮಗೆ ಎಷ್ಟು ದಿನ ಬೇಕೋ ಅಷ್ಟು ದಿನ ತಗೊಳ್ಳಿ. ಟೆನ್ಶನ್ ಮಾಡ್ಕೋಬೇಡಿ. ನಾನು ನಿಮ್ಮ ಸಿಕ್‌ ಲೀವ್‌ ಬಗ್ಗೆ ಎಚ್‌.ಆರ್‌ ಹತ್ತಿರ ಮಾತಾಡ್ತೇನೆ. ಲೀವ್‌ ಲೆಟರ್‌ ಕೊಟ್ಟಿಡಿ’ ಎಂದರು.

ನಾಗರಾಜ್‌ ಸರ್‌ ಅವರ ಹತ್ತಿರದ ಸಂಬಂಧಿಯೊಬ್ಬರು ಇದೇ ಸ್ತನ ಕ್ಯಾನ್ಸರ್‌ ಆಗಿ ಟ್ರೀಟ್‌ಮೆಂಟ್‌ ಪಡೆದು ಗುಣಹೊಂದಿದ್ದರು. ಬ್ರೆಸ್ಟ್‌ ಕ್ಯಾನ್ಸರ್‌ ರೋಗಿಯ ನೋವು, ಯಾತನೆಗಳನ್ನೆಲ್ಲ ಅರಿತಿದ್ದ ಅವರು, ನನಗೆ ಒಂದಷ್ಟು ಸಲಹೆಗಳನ್ನು ನೀಡಿದರು. ‍‘ಕ್ಯಾನ್ಸರ್‌ ಟ್ರೀಟ್‌ಮೆಂಟ್‌ ಒಂದು ಲಾಂಗ್‌ ಪ್ರೊಸೆಸ್. ಒಂದೆರಡು ತಿಂಗಳಲ್ಲಿ ಮುಗಿಯೋದಲ್ಲ. ಸರ್ಜರಿ, ಕಿಮೋ, ರೇಡಿಯೇಷನ್‌ ಇರಲಿದೆ. ಏಳೆಂಟು ತಿಂಗಳೇ ಬೇಕಾಗಬಹುದು’ ಎಂದರು. ‘ಕಿಮೋ ಇಂಜೆಕ್ಷನ್‌ ಕೊಟ್ಟಾಗ ಮನಸ್ಸು ಡಿಪ್ರೆಷನ್‌ಗೆ ಹೋಗುತ್ತದೆ. ಊಟ ಸೇರಲ್ಲ. ವಾಮಿಟ್‌ ಆಗಲಿದೆ. ತೂಕ ಕಡಿಮೆಯಾಗುತ್ತದೆ. ಕೂದಲೆಲ್ಲ ಉದುರಲಿವೆ. ಇಂಜೆಕ್ಷನ್‌ ಮುಗಿದ ನಂತರ ಮತ್ತೆ ಕೂದಲು ಬರುತ್ತವೆ. ಡೋಂಟ್‌ ವರಿ’ ಎಂದರು.

ಅವರ ಆ ಮಾತುಗಳು ನನ್ನಲ್ಲಿ ಭಯಂಕರ ಧೈರ್ಯವನ್ನು ಒಟ್ಟುಗೂಡಿಸಿಕೊಟ್ಟಿತ್ತು. ಟ್ರೀಟ್‌ಮೆಂಟ್ ಹೇಗಿರಲಿದೆ. ಕಿಮೋ ಇಂಜೆಕ್ಷನ್‌, ರೇಡಿಯೇಷನ್‌ ಎಲ್ಲವನ್ನೂ ಅಷ್ಟೇ ಸಮಯದಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದಕ್ಕೆ ನಾನು ಚಿಕಿತ್ಸೆಗೆ ಮಾನಸಿಕವಾಗಿ ಸಿದ್ಧಗೊಳ್ಳಲು ಇನ್ನಷ್ಟು ಸಹಾಯವಾಯಿತು. ಅಲ್ಲೇ ಇದ್ದ ವಿಶಾಲಾಕ್ಷಿ ಅಕ್ಕಿಯವರಿಗೆ ಎಲ್ಲವೂ ಅಸ್ಪಷ್ಟವೆನಿಸಿತೆನೋ? ಏನಾಯ್ತು ಅಂತ ಕೇಳಿದರು. ಮತ್ತೆ ಅವರಿಗೂ ವಿವರಿಸಿದೆ. ನನ್ನ ಮಾತು ಕೇಳಿ ಒಂದು ಕ್ಷಣ ದಂಗು ಬಡಿದವರಂತೆ ನಿಂತರು. ಆದರೆ, ನಾನು ಅತ್ಯಂತ ಸಹಜವಾಗಿ ಹೇಳಿದ್ದಕ್ಕೆ ಅವರಿಗೂ ಆಶ್ಚರ್ಯವಾಯಿತು. ನಾನು ಅಷ್ಟು ಧೈರ್ಯವಾಗಿದ್ದಿದ್ದನ್ನು ನೋಡಿ ಅವರಿಗೆ ಕೊಂಚ ಸಮಾಧಾನ. ಪಕ್ಕದಲ್ಲೇ ಇದ್ದ ಶೈಲಜಾ ಹೂಗಾರ ಅವರು ಏನಾಯ್ತು ಅಂತ ಗಾಬರಿಯಿಂದ ಕೇಳಿದರು. ನನಗೆ ಬ್ಯಾಂಕಿಗೆ ಹೋಗೋ ಅವಸರವಿದ್ದುದ್ದರಿಂದ, ವಿಶಾಲಾಕ್ಷಿ ಮೇಡಂ ನಿಮಗೆ ಹೇಳ್ತಾರೆ ಎಂದ್ಹೇಳಿ ಹೊರಟೆ. ಅಷ್ಟು ಹೊತ್ತಿಗೆ ಜೋಶಿ ಸರ್‌ ತುರ್ತು ಹಣದ ಚೆಕ್ ಅನ್ನು‌ ನನ್ನ ಕೈಗಿಟ್ಟರು.

ಚೆಕ್‌ ಜೊತೆಗೆ ಬ್ಯಾಂಕಿಗೆ ಬಂದರೆ ಅಲ್ಲಿ ಉದ್ದನೆಯ ಸಾಲು ಬ್ಯಾಂಕಿನ ಕೆಳ ಮೆಟ್ಟಿಲು ದಾಟಿ, ರಸ್ತೆಗೆ ಬಂದಿತ್ತು. ಅದೇ ಸಮಯಕ್ಕೆ ನೋಟ್‌ ಬ್ಯಾನ್‌ ಮಾಡಿದ್ದರಿಂದ ದಿನಕ್ಕೆ ಇಂತಿಷ್ಟು ಹಣ ಎಕ್ಸ್‌ಚೇಂಜ್ ಮಾಡಲು ಅವಕಾಶವಿತ್ತು. ಎಲ್ಲರೂ ಬ್ಯಾನ್‌ ಆದ ನೋಟ್‌ ಬದಲಾಯಿಸಿಕೊಳ್ಳುವ ಗದ್ದಲದಲ್ಲಿದ್ದರು. ನಾನು ನೇರವಾಗಿ ಒಳಹೋದೆ. ನನಗೆ ಪರಿಚಯವಿದ್ದ ಸಿಬ್ಬಂದಿಯೊಬ್ಬರಿಗೆ ಇರೋ ವಿಷಯವನ್ನು ತಿಳಿಸಿದೆ. 20 ಸಾವಿರ ರೂಪಾಯಿ ಹೇಗಾದರೂ ಕೊಡಿ ಎಂದೆ. ಅವರೂ ತಕ್ಷಣಕ್ಕೆ ಯೋಚನೆಗೆ ಬಿದ್ದರು. ಏಕೆಂದರೆ ಆ ಪರಿಸ್ಥಿತಿಯಲ್ಲಿ 20 ಸಾವಿರ ರೂಪಾಯಿ ಮೊತ್ತ ಒಂದೇ ಬಾರಿಗೆ ಕೊಡಲು ಅವಕಾಶವಿರಲಿಲ್ಲ. ಆದರೂ ಮ್ಯಾನೇಜರ್‌ ಹತ್ತಿರ ಮಾತನಾಡಿ ಬಂದವರೇ ’ಚೆಕ್‌ ಕೊಟ್ಟಿರಿ. ಕೌಂಟರ್‌ನಲ್ಲಿ ಹಣ ತೆಗೆದುಕೊಳ್ಳಿ‘ ಎಂದು ಹೇಳಿದರು ಮತ್ತು ಕ್ಯಾಶ್‌ ಕೌಂಟರ್‌ನಲ್ಲಿರುವವರಿಗೆ ಸಂದೇಶ ಕಳುಹಿಸಿದರು. ನೋಟ್‌ ಬ್ಯಾನ್‌ ಸಮಯದಲ್ಲೂ ತಕ್ಷಣಕ್ಕೆ ಹಣ ನನ್ನ ಕೈಸೇರಿತು. ಬ್ಯಾಂಕ್‌ ಸಿಬ್ಬಂದಿಗೆ ಥ್ಯಾಂಕ್ಸ್‌ ಹೇಳಿ ಅಲ್ಲಿಂದ ಹೊರಟೆ.

ನವೆಂಬರ್‌ 15. ಬೆಳಿಗ್ಗೆ ಬ್ಯಾಗ್‌ನೊಂದಿಗೆ ನೆಂಟರ ಮನೆಗೆ ಹೊರಟಂತೆ ಆಸ್ಪತ್ರೆಗೆ ಹೊರಟೆ. ಗಿರೀಶ ಜೊತೆಯಲ್ಲಿದ್ದರು. ಆಸ್ಪತ್ರೆಯ ನೋಂದಣಿ ಕೌಂಟರ್‌ ಎದುರು ಮತ್ತೆ ಸಾಲಿತ್ತು. ಕಾಯಿರಿ ಎಂದು ಹೇಳಿದರು. ಅಲ್ಲೇ ಇದ್ದ ಕುರ್ಚಿ ಮೇಲೆ ಕುಳಿತೆ. ನನ್ನ ಸರದಿ ಬರುತ್ತಲೇ ‘ಪೇಷಂಟ್ ಹೆಸರೇನ್ರಿ’ ಎಂದು ಕೂಗಿದಾಗ ಕೃಷ್ಣಿ ಶಿರೂರ ಎಂದೆ. ಎಲ್ಲಿದ್ದಾರೆ ಎಂದು ಕೇಳಿದರು. ‘ನಾನೇರಿ ಪೇಷಂಟು’ ಅಂದೆ. ನನ್ನ ಮೊಗದಲ್ಲಿ ರೋಗಿಗಿರಬೇಕಾದ ಯಾವ ಲಕ್ಷಣವೂ ಇರಲಿಲ್ಲ. ಹಾಗಿದ್ದಾಗ ಯಾರಾದ್ರೂ ಕಣ್ ಬಿಟ್ಟ ನೋಡೇ ನೋಡ್ತಾರೆ ಅಲ್ವ. ಹಾಗೇ ಆಯ್ತು ನನ್ ಕಥೆ. ಆಸ್ಪತ್ರೆಗೆ ದಾಖಲಾದ ಮೇಲೆ ಕೇಳಬೇಕಾ? ಆಸ್ಪತ್ರೆಯ ಸೆಮಿ ಡಿಲಕ್ಸ್ ರೂಮಿನೊಳಗೆ ಪ್ರವೇಶವಾಯ್ತು. ಅಲ್ಲಿ ಮೊದಲೇ ಒಂದು ಅಜ್ಜಿ ಎರಡು ತಿಂಗಳ ಹಿಂದೆಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವತ್ತು ಪೂರ್ತಿ ದಿನ ಆ ಅಜ್ಜಿ ಕಡೆಯವರ ಜೊತೆ ಹರಟಿಯಾಯ್ತು.

ಆಸ್ಪತ್ರೆಯ ಕ್ಯಾನ್ಸರ್‌ ಸ್ಪೆಷಲಿಸ್ಟ್‌ ಡಾ.ದೇಸಾಯಿ ಚೆಕ್‌ ಅಪ್‌ಗೆ ಬಂದ್ರು. ಅವರ ಹಿಂದೆ ವೈದ್ಯಕೀಯ ವಿದ್ಯಾರ್ಥಿಗಳ ತಂಡವಿತ್ತು. ಒಮ್ಮೆ ಕ್ಯಾನ್ಸರ್‌ ಗಡ್ಡೆ ಇರುವ ಭಾಗಗಳನ್ನು ಪರೀಕ್ಷಿಸಿದರು. ಅವರ ಜೊತೆಗಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಜೊತೆ ಒಂದಷ್ಟು ಹೊತ್ತು ಚರ್ಚಿಸಿದರು. ನಂತರ ನನ್ನತ್ತ ತಿರುಗಿ, ‘ಕ್ಯಾನ್ಸರ್‌ನ ಸುದೀರ್ಘ ಚಿಕಿತ್ಸೆಯಲ್ಲಿ ಕಿಮೋ, ಸರ್ಜರಿ ನಂತರ ರೇಡಿಯೋಥೆರಪಿ ಇರಲಿದೆ.ಮೊದಲು ಬಯಾಪ್ಸಿ ವರದಿ ಬರಲಿ. ಅದನ್ನು ನೋಡಿ ವಿಸಿಟಿಂಗ್ ಡಾಕ್ಟರ್‌ ಪ್ರಸಾದ್‌ ಗುನಾರಿ ಅವರು ನೋಡಿದ ಮೇಲೆ, ಅವರ ಹೇಳುವ ಪ್ಲಾನ್‌ ಪ್ರಕಾರ ಚಿಕಿತ್ಸೆ ಆರಂಭಿಸಲಾಗುವುದು’ ಎಂದು ಹೇಳಿ ಹೊರಟರು. ಅವರ ಹಿಂದೆ ಅವರ ಜ್ಯೂನಿಯರ್ಸ್‌ ಬಳಗವೂ ಹೆಜ್ಜೆ ಹಾಕಿತು. ಡಾಕ್ಟರ್‌ ಸಲಹೆ ಮೇರೆಗೆ ಇಸಿಜಿ, ಬಿಪಿ, ರಕ್ತ ಹೀಗೆ ಒಂದೊಂದೆ ಚೆಕ್‌ಅಪ್‌ ನಡೆಯಿತು. ನಂತರ ಎಕ್ಸರೇ, ಸ್ಕ್ಯಾನಿಂಗ್‌ ಮಾಡೋದಿತ್ತು. ನನ್ನನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲು ಬಂದ ಸಿಸ್ಟರ್‌ ವೀಲ್‌ಚೇರ್‌ ಜೊತೆ ಬಂದಿದ್ದರು. ‘ಬನ್ನಿ ಮೇಡಂ’ ಎಂದು ವೀಲ್‌ಚೇರ್‌ನ ಹಿಂದೆ ನಿಂತರು. ‘ಪರ್ವಾಗಿಲ್ಲ ಸಿಸ್ಟರ್‌ನಾನು ನಡೆದೆ ಬರುವೆ’ ಎಂದೆ. ಸರಿ ಎಂದರು ಸಿಸ್ಟರ್‌. ಅವರ ಹಿಂದೆ ನಾನು ಒಂದು ಶಾಲು ಹೊದ್ದು ಹೊರಟೆ. ಕಡೆಪಕ್ಷ, ನಾನು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿ ಎಂದು ಸಿಸ್ಟರ್ಸ್‌ ಹಾಗೂ ಸ್ಕ್ಯಾನಿಂಗ್‌ ಮಾಡುವ ವೈದ್ಯರಿಗೆ ತಿಳಿಯಲಿ ಎಂದು. ಲಿಫ್ಟ್‌ ಬೇಡ; ನಡೆದೇ ಹೋಗೋಣ ಎಂದು ನಡೆದೇ ಹೊರಟೆ. ಎಕ್ಸರೇ, ಸ್ಕ್ಯಾನಿಂಗ್‌ ಮುಗಿದ ಮೇಲೆ ಬಯಾಪ್ಸಿ ಪ್ರಕ್ರಿಯೆ ಬಾಕಿಯಿತ್ತು.

ನ.16ರಂದು ಬೆಳಿಗ್ಗೆ ಬಯಾಪ್ಸಿ ನಡೆಯಿತು. ಎಸ್‌ಡಿಎಂನ ಕಿರಿಯ ವೈದ್ಯರು ಕ್ಯಾನ್ಸರ್‌ ಗಡ್ಡೆಯ ಕೋಶಗಳನ್ನು ಸಂಗ್ರಹಿಸಲು ಬಂದರು. ದೊಡ್ಡ ದಬ್ಬಣದಂತಹ ಸೂಜಿ ಪಿಸ್ತೂಲ್‌ ರೂಪದಲ್ಲಿತ್ತು. ಗಡ್ಡೆ ಇರುವ ಭಾಗಕ್ಕೆ ಲೋಕಲ್‌ ಅನಸ್ತೇಷಿಯಾ ಕೊಟ್ರು. ‘ನೋವಾಗುತ್ತೆ. ಹೆದ್ರಕೋಬೇಡಿ, ಅಲುಗಾಡಬೇಡಿ’ ಎಂದರು. ಆಯಾ ನನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿ ಗಟ್ಟಿಯಾಗಿ ಹಿಡಿದುಕೊಂಡರು. ಕಿರಿಯ ವೈದ್ಯರು ದಬ್ಬಣದಂತಹ ಸೂಜಿಯನ್ನು ಕ್ಯಾನ್ಸರ್‌ ಗಡ್ಡೆ ಇರುವ ಭಾಗಕ್ಕೆ ಶೂಟ್‌ ಮಾಡಿ ಅದಕ್ಕೆ ಚುಚ್ಚಿ ಗಡ್ಡೆಯ ಕೋಶಗಳನ್ನು ಕಟ್‌ ಮಾಡಿ ದ್ರಾವಣ ತುಂಬಿದ ಒಂದು ಪುಟ್ಟ ಬಾಟಲಿಯಲ್ಲಿ ಸಂಗ್ರಹಿಸಿದರು. ಹಿಂದೆಲ್ಲ ಇಂಜೆಕ್ಷನ್‌ ಔಷಧದ ಬಾಟಲಿ ಇರ್ತಿತ್ತಲ್ಲ ಅಂಥ ಬಾಟಲಿ. ಒಂದೊಂದು ಶಾಟ್‌ಗೂ ನೋವಾಯ್ತಾ ಅಂತ ಕೇಳಿದರು. ಇಲ್ಲ ಅಂದೆ. ಒಂದೊಂದು ಶಾಟ್‌ಗೂ ಆಯಾ ನನ್ನೆರಡು ಕೈಗಳನ್ನು ಮತ್ತೆ ಮತ್ತೆ ಮೇಲಕ್ಕೆ ಒತ್ತಿ ಹಿಡಿಯುತ್ತಿದ್ದರು. ಆ ಇಬ್ಬರು ಕಿರಿಯ ಡಾಕ್ಟರ್‌ ನನ್ ಬಗ್ಗೆ ಏನ್‌ ತಿಳಕೊಂಡ್ರೋ ಏನೋ? ಮುಖಮುಖ ನೋಡಿಕೊಂಡಾಗ ಅವರಿಬ್ಬರ ಮುಖದಲ್ಲಿ ಅಚ್ಚರಿಯನ್ನು ಗಮನಿಸಿದೆ. ಸುಮಾರು ಏಳೆಂಟು ಶೂಟ್‌ ಮಾಡಿ ಬಿಳಿ ಬಿಳಿ ಕೋಶಗಳನ್ನು ಬಾಟಲಿಗೆ ತುಂಬಿದಾಗ ಮ್ಯಾಗಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ಹಾಕಿದಂತೆ ಕಂಡಿತು. ಅಂತೂ ಈ ಪ್ರಕ್ರಿಯೆ ಮುಗಿದು, ರೂಮ್‌ಗೆ ಆಯಾ ಕರೆದುಕೊಂಡು ಬಂದರು. ಕೋಶಗಳನ್ನು ಕಟ್‌ ಕಟ್‌ ಮಾಡಿ ತೆಗೆದಿರುವುದಕ್ಕೆನೋ? ಎದೆ ಪೂರ್ತಿ ಇನ್ನಷ್ಟು ಗಟ್ಟಿಯಾಗಿ, ಭಾರವೆನಿಸಿತು. ಲೋಕಲ್‌ ಅನಸ್ತೇಷಿಯಾ ಪ್ರಭಾವ ಇಳಿಯುತ್ತಲೇ ಸಣ್ಣದಾಗಿ ನೋವು ಶುರುವಾಯಿತು. ಏಳೆಂಟು ಸಣ್ಣ ಸಣ್ಣ ಗುಂಡುಗಳು ಸ್ತನವನ್ನು ಸೀಳಿ ಒಳ ಹೊಕ್ಕಂಥ ಯಾತನೆ. ನೋವನ್ನು ಸಹಿಸಿಕೊಂಡೆ. ಸ್ನಾನ ಮಾಡಿ ವಿಶ್ರಾಂತಿ ಪಡೆದೆ.

ಸ್ತನದ ಗಂಟುಭಾಗದಿಂದ ತೆಗೆದಿದ್ದ ಈ ಕೋಶಗಳನ್ನು ಬೆಂಗಳೂರಿಗೆ ಕಳಿಸಬೇಕಿತ್ತು. ಅದರಿಂದ ಕ್ಯಾನ್ಸರ್‌ ಯಾವ ಹಂತದಲ್ಲಿದೆ? ಮುಂದೆ ಕ್ಯಾನ್ಸರ್‌ ಮರುಕಳಿಸಬಹುದಾದ ಸಂಭವ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಬಯಾಪ್ಸಿ ವರದಿ ಹೇಳುತ್ತದೆ. ಅದನ್ನು ಸಂಜೆಯೇ ಬೆಂಗಳೂರಿಗೆ ರವಾನಿಸಬೇಕಾಗಿದ್ದರಿಂದ ನನ್ನ ಮಾಮ ಅರ್ಜೆಂಟ್‌ ಹುಬ್ಬಳ್ಳಿ ಸ್ಕ್ಯಾನ್‌ ಸೆಂಟರ್‌ಗೆ ಒಯ್ದು ಡಾ.ಸುಜಾತಾ ಗಿರಿಯನ್‌ ಅವರಿಗೆ ನೀಡಿದರು. ಮುಂದೆ ಅದು ಬೆಂಗಳೂರಿಗೆ ಸಾಗಿತ್ತು.

ನ.17ರ ಬೆಳಿಗ್ಗೆ ನನ್ನ ನೋಡಲು ಬಂದ ಡಾ. ದೇಸಾಯಿ ಮತ್ತವರ ತಂಡ, ಬಯಾಪ್ಸಿ ರಿಪೋರ್ಟ್‌ ಬರಲು ವಾರ, ಹತ್ತು ದಿನಗಳೇ ಆಗಬಹುದು ಎಂದರು. ಎಸ್‌ಡಿಎಂ ಆಸ್ಪತ್ರೆಯ ವಿಸಿಟಿಂಗ್‌ ಆಂಕಾಲೊಜಿ ಡಾ.ಪ್ರಸಾದ್‌ ಗುನಾರಿ ಬಂದು ನೋಡಿ ಪ್ಲಾನ್‌ ಹೇಳಿದ ನಂತರವೇ ಟ್ರೀಟ್‌ಮೆಂಟ್‌ ಶುರು ಮಾಡ್ತೇವೆ ಎಂದಾಗ, ಕಿರಿಯ ವೈದ್ಯರೊಬ್ಬರು ನಡುವೆ ಮಾತನಾಡಿ, ’ಡಾ.ಗುನಾರಿ ಈ ವಾರ ಬರಲ್ವಂತೆ‘ ಎಂದರು. ಅದಕ್ಕೆ ಡಾ.ದೇಸಾಯಿ, ’ಸರಿ ಅವರು ಬಂದ ಮೇಲೆ ರಿಪೋರ್ಟ್‌ ಜೊತೆ ಬನ್ನಿ’ ಎಂದರು.

ಒಂದು ವಾರ ಆಸ್ಪತ್ರೆಯಲ್ಲಿ ಇದ್ದು, ಸುಮ್ಮನೆ ಆಸ್ಪತ್ರೆ ಬಿಲ್‌ ಜಾಸ್ತಿ ಮಾಡೋ ಬದಲು ಮನೆಗೆ ಹೋಗೋದೆ ಒಳ್ಳೆದು ಎಂದು ನ.18ಕ್ಕೆ ಡಿಸ್ಚಾರ್ಜ್‌ ಆಗುವುದಾಗಿ ಹೇಳಿದೆ. ಡಿಸ್ಚಾರ್ಜ್‌ ಪ್ರಕ್ರಿಯೆ ಮುಗಿದು ಮನೆಗೆ ಹೊರಡುವಾಗ ಸಂಜೆ 5 ಆಗಿತ್ತು. ಆದರೆ ಅದುವರೆಗೂ ಒಂದು ಹಂತದಲ್ಲಿದ್ದ ಕ್ಯಾನ್ಸರ್‌ ಗಡ್ಡೆ ಇದ್ದಕ್ಕಿದ್ದಂತೆ ದೊಡ್ಡದೆನಿಸಿತು. ಮನಸ್ಸು, ಎದೆಗೆ ಭಾರವೆನಿಸಿತು. ಬಯಾಪ್ಸಿ ರಿಪೋರ್ಟ್‌ ಯಾವಾಗ ಬರಲಿದೆಯೋ? ಚಿಕಿತ್ಸೆ ಯಾವಾಗ ಆರಂಭವಾಗಲಿದೆಯೋ ಎಂಬ ಯೋಚನೆ ಶುರುವಾಯಿತು. ಚಿಕಿತ್ಸೆಗೆ ಎಷ್ಟು ಖರ್ಚು ಬರಲಿದೆಯೆನೋ. ಗಿರೀಶ ಅವರ ಇಎಸ್‌ಐ ಸೌಲಭ್ಯ ಇದ್ದರೂ ಅದು ಇಂಜೆಕ್ಷನ್‌ಗೆ ಮಾತ್ರ ಅನ್ವಯವಾಗಲಿದೆ. ಉಳಿದ ಖರ್ಚನ್ನು ಹೇಗೆ ನಿಭಾಯಿಸುವುದು ಎಂಬ ಯೋಚನೆ ಆರಂಭವಾಯಿತು. ಮನೆಯಲ್ಲಿ ಸುಮ್ಮನೆ ಕುಳಿತುಕೊಂಡಾಗ ಇಂತಹ ಬೇಡದಿದ್ದ ಯೋಚನೆಗಳೇ ಮುತ್ತಿಕೊಳ್ಳುವುದು ಸಹಜ. ಇಂಥ ಅಗತ್ಯ ಯೋಚನೆಗಳೇ ನನ್ನ ತಲೆಯಲ್ಲೂ ಸುತ್ತ ತೊಡಗಿದವು.

(ಮುಂದಿನ ವಾರ: ಕೈ ಹಿಡಿದಳು ಗಾಯತ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT