ಬೆಂಗಳೂರಿನಲ್ಲಿ ದಿನೇ ದಿನೇ ವಾಹನ ದಟ್ಟಣೆಯಿಂದ ಸಂಚಾರ ಅಸಾಧ್ಯವಾಗಿದೆ. ಸಮೂಹ ಸಾರಿಗೆ ಮೆಟ್ರೊ ಪ್ರಯಾಣ ದರ ಹೆಚ್ಚಳ ಮಾಡಿದರೆ ಜನರಿಗೆ ಹೊರೆ ಆಗಲಿದೆ. ಬೆಂಗಳೂರು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ದರ ಏರಿಕೆ ಮಾಡಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳ ಅನುಮೋದಿಸಿದ ಬಿಎಂಆರ್ಸಿಎಲ್ ಮಂಡಳಿಯು 10 ಸದಸ್ಯರನ್ನು ಹೊಂದಿದೆ. ಇದರಲ್ಲಿ ಐವರು ರಾಜ್ಯದ ಪ್ರತಿನಿಧಿಗಳು ಹಾಗೂ ಐವರು ಕೇಂದ್ರದಿಂದ ನಿಯೋಜಿತರಾದವರು. ಕೇಂದ್ರದಿಂದ ನೇಮಿಸಲಾದ ಅಧ್ಯಕ್ಷರಿಗೆ ಮತದಾನದ ಅಧಿಕಾರವಿಲ್ಲ. ಹೀಗಾಗಿ, ದರ ಹೆಚ್ಚಳವನ್ನು ರಾಜ್ಯದ ನಾಮನಿರ್ದೇಶಿತ ಸದಸ್ಯರೇ ನಿರ್ಣಯಿಸಿದ್ದಾರೆ. ಅವೈಜ್ಞಾನಿಕವಾಗಿ ಮಾಡಿರುವ ಈ ಅನ್ಯಾಯದ ಏರಿಕೆಯನ್ನು ಕೈ ಬಿಡಬೇಕು.
– ಪಿ.ಸಿ.ಮೋಹನ್, ಬೆಂಗಳೂರು ಕೇಂದ್ರ ಸಂಸದ
ಎಂಟು ತಿಂಗಳಲ್ಲೇ ಎರಡನೇ ಬಾರಿ ಪ್ರಯಾಣ ದರ ಏರಿಸಿ ರಾಜ್ಯ ಸರ್ಕಾರವು ಪ್ರಯಾಣಿಕರಿಗೆ ಬರೆ ಹಾಕಿದೆ. ಪ್ರಯಾಣ ದರ ಹೆಚ್ಚಳ ತಡೆ ಹಿಡಿಯುವಂತೆ ಒತ್ತಾಯಿಸಿ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಮನವಿ ಮಾಡಿದ್ದೇನೆ. ಮೆಟ್ರೊ ನಿಗಮ ಮಾಡಿರುವ ತಪ್ಪುಗಳನ್ನು ಅವರಿಗೆ ತಿಳಿಸಿದ್ದೇನೆ. ದರ ಹೆಚ್ಚಳ ಮಾಡಿರುವುದು ಕೇಂದ್ರ ಸರ್ಕಾರ ಅಲ್ಲ. ಇದೊಂದು ಭಂಡ ಸರ್ಕಾರ.