ಬೆಂಗಳೂರು: ಸೆ. 29ರಂದು ಕರ್ನಾಟಕ ಬಂದ್ಗೆ ಕರೆ ನೀಡಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ನಗರ ಹಲವು ಹೋರಾಟಗಾರರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಬೆಂಗಳೂರಿನ ಯಾವ ಭಾಗದಲ್ಲೂ ಧರಣಿ/ಪ್ರತಿಭಟನೆಗೆ ಅವಕಾಶವಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
‘ಜನರ ಹಕ್ಕುಗಳಿಗೆ ಚ್ಯುತಿ ಉಂಟು ಮಾಡದಂತೆ ಹಾಗೂ ಆಸ್ತಿಗೆ ಹಾನಿ ಮಾಡದಂತೆ ಸುಪ್ರೀಂಕೋರ್ಟ್– ಹೈಕೋರ್ಟ್ ಆದೇಶವಿದೆ. ಇದನ್ನು ಉಲ್ಲಂಘಿಸಿ ಧರಣಿ, ಪ್ರತಿಭಟನೆ, ಮೆರವಣಿಗೆ ಮಾಡಲು ನಗರದಲ್ಲಿ ಅವಕಾಶವಿಲ್ಲ. ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಿದರೆ, ಅದರಿಂದ ಉಂಟಾಗುವ ನಷ್ಟಕ್ಕೆ ನೀವು (ಹೋರಾಟಗಾರರು/ಸಂಘಟಕರು) ಹೊಣೆಗಾರರು. ನಿಮ್ಮ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಬಂದ್ ಆರಂಭಕ್ಕೂ ಮುನ್ನವೇ ನೋಟಿಸ್ ನೀಡಿರುವ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು, ‘ಕಾವೇರಿ ನದಿ ವಿಚಾರವಾಗಿ ರೈತರು–ಜನರ ಪರವಾಗಿ ಹಮ್ಮಿಕೊಳ್ಳುತ್ತಿರುವ ಬಂದ್ ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆ. ಪೊಲೀಸರ ಮೂಲಕ ನೋಟಿಸ್ ಕೊಡಿಸಿದೆ. ಇದಕ್ಕೆ ನಾವು ಹೆದರುವುದಿಲ್ಲ. ನಾಳೆ ಬಂದ್ ಆರಂಭಿಸುತ್ತೇವೆ’ ಎಂದಿದ್ದಾರೆ.