ಗೋವಿಂದರಾಜು ವಿ.
ಹಾರೋಹಳ್ಳಿ (ರಾಮನಗರ): ಹಾರೋಹಳ್ಳಿ ತಾಲ್ಲೂಕಿನ ಅಗರ ಗ್ರಾಮದ ಕಾಡುಕುರುಬ ಸಮುದಾಯಕ್ಕೆ ಸೇರಿದ ಯಾರಾದರೂ ತಪ್ಪು ಮಾಡಿ ಪಂಚಾಯಿತಿ ಹೇಳಿದಷ್ಟು ದಂಡ ಕಟ್ಟದಿದ್ದರೆ ‘ಸಮುದಾಯ ಬಹಿಷ್ಕಾರ’ ಎದುರಿಸುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ.
ಹಾರೋಹಳ್ಳಿ ತಾಲ್ಲೂಕಿನ ಅಗರ ಗ್ರಾಮದಲ್ಲಿ ಕಾಡುಕುರುಬ ಕಾಲೊನಿಯಲ್ಲಿ ಈ ಸಮುದಾಯದ 30ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಸಮುದಾಯಕ್ಕೆ ಸೇರಿದ ಯಾರೇ ಆದರೂ ಜಗಳವಾಡಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದರೆ, ಪ್ರೀತಿಸಿ ಮದುವೆಯಾದರೆ, ಅಂತರ್ಜಾತಿ ಮದುವೆಯಾದರೆ ಸಮುದಾಯದ ಮುಖಂಡರು ನಡೆಸುವ ಪಂಚಾಯಿತಿ ಅದನ್ನು ತಪ್ಪು ಎಂದು ಪರಿಗಣಿಸುತ್ತದೆ.
ಕಾಡುಕುರುಬ ಸಮುದಾಯದ ಮುಖಂಡರೇ ನಡೆಸುವ ಪಂಚಾಯಿತಿಯಲ್ಲಿ ಈ ಪ್ರಕರಣಗಳ ವಿಚಾರಣೆ ನಡೆಯುತ್ತದೆ. ಪಂಚಾಯಿತಿ ಮುಖ್ಯಸ್ಥರು ಪ್ರಕರಣಗಳನ್ನು ಚರ್ಚಿಸಿ, ದಂಡ ವಿಧಿಸುತ್ತಾರೆ. ದಂಡ ಕಟ್ಟದಿದ್ದರೆ ಶಿಕ್ಷೆಗೊಳಗಾದ ವ್ಯಕ್ತಿ ಅಥವಾ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುತ್ತದೆ.
ಬಹಿಷ್ಕಾರಕ್ಕೊಳಗಾದವರು ಸಮುದಾಯದ ಯಾರೊಂದಿಗೂ ಮಾತನಾಡುವಂತಿಲ್ಲ. ಯಾರ ಮನೆಗೂ ಹೋಗುವಂತಿಲ್ಲ. ಅವರ ಮನೆಗೂ ಯಾರೂ ಬರುವಂತಿಲ್ಲ. ಅಷ್ಟೇ ಅಲ್ಲ, ಬಹಿಷ್ಕಾರಕ್ಕೊಳಗಾದ ಕುಟುಂಬದಲ್ಲಿ ಶುಭ ಕಾರ್ಯ ನಡೆದರೆ ಅಥವಾ ಯಾರಾದರೂ ಸತ್ತರೂ ಯಾರೂ ಅವರ ನೆರವಿಗೆ ಧಾವಿಸುವಂತಿಲ್ಲ.
ಈ ರೀತಿಯ ಬಹಿಷ್ಕಾರ ಗ್ರಾಮದಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಸಣ್ಣಪುಟ್ಟ ಕಾರಣಗಳಿಗಾಗಿ ಈ ರೀತಿಯ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕಾಡುಕುರುಬ ಸಮುದಾಯದ ಹಲವು ಕುಟುಂಬಗಳು ಮಾನಸಿಕ ಯಾತನೆ ಅನುಭವಿಸಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಪ್ರೀತಿಸಿ ಮದುವೆ, ಅಂತರ್ಜಾತಿ ವಿವಾಹವಾದರೆ ಬಹಿಷ್ಕಾರ * ಭಾರಿ ಮೊತ್ತದ ದಂಡ * ಸತ್ತರೂ ನೆರವಿಗೆ ಧಾವಿಸುವಂತಿಲ್ಲ
ಬಹಿಷ್ಕಾರದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದುಜಯಪ್ರಕಾಶ್ ಟಿ.ಎಂ. ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಕನಕಪುರ
ಕಾಡುಕುರುಬ ಸಮುದಾಯ ನೆಲೆಸಿರುವ ಕೆಲವು ಗ್ರಾಮಗಳಲ್ಲಿ ಇಂದಿಗೂ ಈ ಪದ್ಧತಿ ಇದೆ. ಸರ್ಕಾರ ಇತ್ತ ಗಮನಹರಿಸಿ ಅರಿವು ಮೂಡಿಸಬೇಕಿದೆಶ್ರೀನಿವಾಸ್ ಗ್ರಾಮದ ಮುಖಂಡ ಅಗರ
ನಾನು ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ಪಂಚಾಯಿತಿ ವಿಧಿಸಿದ್ದ ₹50 ಸಾವಿರ ದಂಡ ಕಟ್ಟಲಿಲ್ಲ ಎಂಬ ಕಾರಣಕ್ಕೆ ನನಗೆ ಬಹಿಷ್ಕಾರ ಹಾಕಲಾಗಿದೆ.ಕಿರಣ್ ಅಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.