ತುಮಕೂರು: ಬಿಜೆಪಿಯವರು ಚುನಾವಣೆಗಾಗಿ ರಾಮಮಂದಿರ ಕಟ್ಟಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆಟ್ಟ ಹಾದಿಯಲ್ಲಿ ತೆಗೆದುಕೊಂಡು ಹೋಗಬಾರದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಾಬ್ರಿ ಮಸೀದಿ ಗಲಾಟೆಯ ಸಮಯದಲ್ಲಿ ನಾನು ಅಯೋಧ್ಯೆಗೆ ಭೇಟಿ ನೀಡಿದ್ದೆ. ಒಂದು ಟೆಂಟ್ನಲ್ಲಿ ಎರಡು ಬೊಂಬೆ ತಂದಿಟ್ಟು ಶ್ರೀರಾಮ ಎಂದು ಹೇಳುತ್ತಿದ್ದರು. ನಾವು ಒಳಗಡೆ ಹೋಗಿ ನೋಡಿದರೆ ದೇವಸ್ಥಾನ ಅಂತ ಅನ್ನಿಸುತ್ತಿರಲಿಲ್ಲ. ಟೂರಿಂಗ್ ಟಾಕಿಸ್ನ ಬೊಂಬೆಗಳಂತೆ ಕಂಡವು. ಇವತ್ತು ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ’ ಎಂದರು.
‘ನಾವು ಸಹ ಹಿಂದೂಗಳು. ಆದರೆ, ಹಿಂದುತ್ವವನ್ನು ಯಾರಿಗೂ ಜಹಾಗೀರ್ ಕೊಟ್ಟಿಲ್ಲ. ನಾವು ಗಾಂಧೀಜಿ ಹಾದಿಯಲ್ಲಿ ಸಾಗುವ ಹಿಂದೂಗಳು. ಬಿಜೆಪಿಯವರು ಗಾಂಧಿ ಕೊಂದ ಗೋಡ್ಸೆ ವಿಚಾರಗಳನ್ನು ಪ್ರಚಾರ ಪಡಿಸುವ ಹಿಂದೂಗಳು’ ಎಂದು ಟೀಕಿಸಿದರು.