ಚೆನ್ನೈ/ಕನ್ಯಾಕುಮಾರಿ: ಭಾನುವಾರ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗಿದ್ದು, ತಿರುನಲ್ವೇಲಿ, ತೂತುಕುಡಿ ಹಾಗೂ ಕನ್ಯಾಕುಮಾರಿ ಜಿಲ್ಲೆಗಳ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿನ ರಸ್ತೆಗಳು ಮತ್ತು ಹೆದ್ದಾರಿಗಳು ನದಿಗಳಂತೆ ಗೋಚರಿಸುತ್ತಿವೆ.
ಪ್ರವಾಹದ ನೀರು ಜನವಸತಿ ಪ್ರದೇಶ ಹಾಗೂ ರಸ್ತೆಗಳ ಮೇಲೆ ಹರಿಯುತ್ತಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನರು ಆತಂಕಗೊಂಡಿದ್ದಾರೆ.
100ಕ್ಕೂ ಹೆಚ್ಚು ಮನೆಗಳು ಜಲಾವೃತ:
ತಿರುನೆಲ್ವೇಲಿಯ ಸೀವಲಪೇರಿಯಲ್ಲಿನ ಕೆಲ ನಿವಾಸಿಗಳು ಎರಡು ಅಂತಸ್ತಿನ ಮನೆಗಳ ಟೆರೇಸ್ ಮೇಲೆ ಆಶ್ರಯ ಪಡೆದಿದ್ದಾರೆ. ಇಲ್ಲಿನ ಮೀನಾಕ್ಷಿಪುರಂನಲ್ಲೂ ಇದೇ ದೃಶ್ಯ ಕಂಡುಬಂತು. ನಾಗರಕೋಯಿಲ್ನ ನೆಸಾವಲರ್ ಕಾಲೋನಿಯಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣ ತಂಡಗಳು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ. ‘ಇಂತಹ ಮಳೆ ಮತ್ತು ಪ್ರವಾಹವನ್ನು ನಾವು ಹಿಂದೆಂದೂ ನೋಡಿಲ್ಲ' ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.