ಚೆನ್ನೈ (ಪಿಟಿಐ): ಮಹಿಳೆಯರು ‘ಮಂಗಳಸೂತ್ರ’ ಧರಿಸುವುದು ಮತ್ತು ಅವರ ಹಕ್ಕುಗಳ ಕುರಿತ ಚರ್ಚೆಗೆ ಹಿಂದೂ ಮುನ್ನಾನಿ ಸಂಘಟನೆ ವಿರೋಧ ವ್ಯಕ್ತಪಡಿಸಿದ ಕಾರಣ ತಮಿಳು ಟಿ.ವಿ ವಾಹಿನಿ ತನ್ನ ಕಾರ್ಯಕ್ರಮವನ್ನು ಹಿಂತೆಗೆದುಕೊಂಡ ಒಂದೇ ದಿನದೊಳಗೆ ಈ ಬಗ್ಗೆ ಪರ ವಿರೋಧದ ಚರ್ಚೆಗೆ ಸಾಮಾಜಿಕ ಮಾಧ್ಯಮ ತಾಣಗಳು ವೇದಿಕೆಯಾಗಿವೆ.
ಮಹಿಳೆಯರಿಂದ ಮಂಗಲಸೂತ್ರ ಧಾರಣೆ ಕುರಿತ ಚರ್ಚಾ ಕಾರ್ಯಕ್ರಮವನ್ನು ಹಿಂದೂ ಮುನ್ನಾನಿ ವಿರೋಧಿಸಿ ಪ್ರತಿಭಟನೆ ನಡೆಸಿದ ಪರಿಣಾಮ ‘ಮಂಗಲಸೂತ್ರ’ ಕಾರ್ಯಕ್ರಮವನ್ನು ವಾಹಿನಿ ಭಾನುವಾರ ಸ್ಥಗಿತಗೊಳಿಸಿತ್ತು. ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ವಾಹಿನಿಯ ಕ್ಯಾಮರಾಮೆನ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕ್ಯಾಮೆರಾವನ್ನೂ ಮುರಿದಿದ್ದಾರೆ ಎಂಬ ಆರೋಪದ ಮೇರೆಗೆ ಹಿಂದೂ ಮುನ್ನಾನಿಯ ಸದಸ್ಯರನ್ನು ಬಂಧಿಸಲಾಗಿತ್ತು.
ಘಟನೆಯ ನಂತರ ಫೇಸ್ಬುಕ್, ಮೊಬೈಲ್ ಸಂದೇಶ ಮತ್ತು ವಾಟ್ಸ್ಆ್ಯಪ್ ಮೂಲಕ ಕಾರ್ಯಕ್ರಮ ಮತ್ತು ಪ್ರತಿಭಟನೆಯ ಪರ–ವಿರೋಧದ ಚರ್ಚೆ ಬಿರುಸಿನಿಂದ ಸಾಗಿದೆ. ಘಟನೆ ಸಂಬಂಧ ಸೋಮವಾರವೂ ರಾಜಧಾನಿಯ ವಿವಿಧೆಡೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.