ಬಲ್ಲಿಯಾ: ಉತ್ತರ ಪ್ರದೇಶದ ಮಾಲ್ದೆಪುರ ಗ್ರಾಮದ ಗಂಗಾ ನದಿಯಲ್ಲಿ ತೇಲಿಬಂದ ಶವವೊಂದಕ್ಕೆ ಪೆಟ್ರೋಲ್ ಮತ್ತು ಟೈರ್ ಬಳಸಿ ಅಂತ್ಯಸಂಸ್ಕಾರ ನೆರವೇರಿಸಿದ ಐವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಜೈಸಿಂಗ್, ಉಮೇಶ್ ಪ್ರಜಾಪತಿ, ವೀರೇಂದ್ರ ಯಾದವ್, ಪುನೀತ್ ಪಾಲ್ ಮತ್ತು ಜೈ ಅಮಾನತುಗೊಂಡ ಪೊಲೀಸ್ ಕಾನ್ಸ್ಟೇಬಲ್ಗಳು.
‘ಪೊಲೀಸರು ಮೃತದೇಹದ ಅಂತ್ಯಸಂಸ್ಕಾರವನ್ನು ನಡೆಸುತ್ತಿರುವ ವಿಡಿಯೊ ಸೋಮವಾರ ವೈರಲ್ ಆಗಿತ್ತು. ಅಂತಿಮ ವಿಧಿ–ವಿಧಾನಗಳನ್ನು ನೆರವೇರಿಸುವಾಗ ಪೊಲೀಸರು ಅಸೂಕ್ಷ್ಮತೆಯಿಂದ ವರ್ತಿಸಿದ್ದಾರೆ. ಈ ಸಂಬಂಧ ಐವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡ ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಯಾದವ್ ಅವರು ತನಿಖೆ ನಡೆಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಗಂಗಾ ನದಿಯಲ್ಲಿ ತೇಲಿಕೊಂಡು ಬಂದಿದ್ದ ಶವಗಳ ಅಂತ್ಯಸಂಸ್ಕಾರವನ್ನು ಮೇ 15ರಂದು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಶವಗಳ ಮೇಲೆ ಟೈರ್ ಇಟ್ಟು ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಂತ್ಯಸಂಸ್ಕಾರ ನಡೆಸಲಾಗಿತ್ತು ಎಂದು ಫೆಫಾನಾ ಪೊಲೀಸ್ ಠಾಣಾಧಿಕಾರಿ ಸಂಜಯ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.