ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 1989ರಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಆರಂಭವಾದಾಗಿನಿಂದ 5,800ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಹತರಾಗಿದ್ದಾರೆ ಎಂದು ಲೋಕಸಭೆಗೆ ಮಂಗಳವಾರ ತಿಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರವು ಭಯೋತ್ಪಾದಕರ ಹಿಂಸಾಚಾರಕ್ಕೆ ನಲುಗಿದೆ. ಈ ಕೃತ್ಯಗಳನ್ನು ಗಡಿಯಾಚೆಯಿಂದ ಪ್ರಾಯೋಜಿಸಲಾಗುತ್ತಿದೆ, ಬೆಂಬಲಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ಹೇಳಿದರು.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಆರಂಭವಾದಾಗಿನಿಂದ ಈ ವರೆಗೆ (ಆಗಸ್ಟ್ 5, 1989ರಿಂದ , 2019ರವರೆಗೆ– 30 ವರ್ಷ) ಅಲ್ಲಿ, 5,886 ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು.
ಜಮ್ಮು ಕಾಶ್ಮೀರದಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಉಗ್ರರ ವಿರುದ್ಧ ಎನ್ಕೌಂಟರ್ಗಳು, ಪೊಲೀಸ್–ಸೇನೆ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಇಂಥ ಕಾರ್ಯಾಚಾರಣೆಗಳಲ್ಲಿ ಭದ್ರತಾ ಸಿಬ್ಬಂದಿ, ಪೊಲೀಸರು ಮೃತಪಟ್ಟ ಎಷ್ಟೋ ಪ್ರಕರಣಗಳು ವರದಿಯಾಗಿವೆ.