ಮುಂಬೈ: ಮಹಾರಾಷ್ಟ್ರ ಸರ್ಕಾರ ಮಂಗಳವಾರ 86 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಅದರಲ್ಲಿ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ವಿಚಾರಣೆಗೊಳಪಡಿಸಿರುವ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರ ಸಹೋದ್ಯೋಗಿಗಳೂ ಸೇರಿದ್ದಾರೆ ಎಂದು ನಗರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ಯಮಿ ಮುಕೇಶ್ ಅಂಬಾನಿಯವರ ದಕ್ಷಿಣ ಮುಂಬೈ ನಿವಾಸದ ಸಮೀಪದಲ್ಲಿ ಸ್ಫೋಟಕ ತುಂಬಿದ ವಾಹನ ಪತ್ತೆ ಪ್ರಕರಣದಲ್ಲಿ ಈಗಾಗಲೇ ಸಚಿನ್ ವಾಜೆ ಅವರನ್ನು ಬಂಧಿಸಿ, ಎನ್ಐಎ ವಿಚಾರಣೆ ನಡೆಸುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಮೇಲೆ ತೀವ್ರ ಒತ್ತಡ ಉಂಟಾಗಿದ್ದು, ಸ್ವತಃ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧವೇ ಆರೋಪಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಗೃಹ ಸಚಿವ ಅನಿಲ್ ದೇಶಮುಖ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ನಂತರ ಪೊಲೀಸರನ್ನು ವರ್ಗಾವಣೆ ಮಾಡಲಾಯಿತು.
ವರ್ಗಾವಣೆಯಾದವರಲ್ಲಿ ಅಪರಾಧ ಗುಪ್ತಚರ ಘಟಕದಲ್ಲಿ ವಾಜೆ ಅವರ ಸಹೋದ್ಯೋಗಿಯಾಗಿದ್ದ ಎಪಿಐ ರಿಯಾಜುದ್ದೀನ್ ಕಾಜಿ ಸೇರಿದ್ದಾರೆ. ಅವರನ್ನು ಸ್ಥಳೀಯ ಶಸ್ತ್ರಾಸ್ತ್ರಗಳ ಘಟಕಕ್ಕೆ ವರ್ಗಾಯಿಸಲಾಗಿದೆ. ಇದು ಇಲಾಖೆಯಲ್ಲಿ ಕಡಿಮೆ ದರ್ಜೆಯ ಹುದ್ದೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.