ಮುಂದುವರಿದು, ‘ಅಫ್ಗಾನಿಸ್ತಾನದ ಮಣ್ಣನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಯಾವತ್ತೂ ಬಳಸಬಾರದು ಎಂಬುದು ನಮ್ಮ ನಿರೀಕ್ಷೆ’ ಎಂದಿದ್ದಾರೆ.ಭಾರತವು ಅಫ್ಗಾನಿಸ್ತಾನದ ಪ್ರಮುಖ ಅಭಿವೃದ್ಧಿ ಪಾಲುದಾರ ಎಂದು ಒತ್ತಿಹೇಳಿದ ಅವರು, ಇತ್ತೀಚಿನ ವರ್ಷಗಳಲ್ಲಿ ಯುದ್ಧದಿಂದ ಹಾನಿಗೊಳಗಾದ ಈ ದೇಶಕ್ಕೆ ಭಾರತವು ಹತ್ತು ಲಕ್ಷ ಟನ್ನಷ್ಟು ಆಹಾರಧಾನ್ಯಗಳನ್ನು ಪೂರೈಸಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಸಚಿವ, ‘ದೋಹಾದಲ್ಲಿ ನಡೆದ ಅಫ್ಗನ್ ಶಾಂತಿ ಮಾತುಕತೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದೆ. ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಯು ಅಫ್ಗಾನಿಸ್ತಾನದ ಮುಂದಾಳತ್ವದಲ್ಲಿ, ಅಫ್ಗನ್ ಒಡೆತನದಲ್ಲಿ, ಅಫ್ಗನ್ ನಿಯಂತ್ರಣದಲ್ಲಿರಲಿ. ರಾಷ್ಟ್ರೀಯ ಸಾರ್ವಭೌಮತೆ ಮತ್ತು ಅಫ್ಗಾನಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನುಗೌರವಿಸಬೇಕು.ಮಾನವ ಹಕ್ಕು ಹಾಗೂ ಪ್ರಜಾಪ್ರಭುತ್ವನ್ನು ಉತ್ತೇಜಿಸಬೇಕು. ಅಲ್ಪಸಂಖ್ಯಾತರು, ದುರ್ಬಲರು ಮತ್ತು ಮಹಿಳೆಯರ ಹಿತಾಸಕ್ತಿಯನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ದೇಶದಾದ್ಯಂತ ಹಿಂಸಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು’ ಎಂದು ತಿಳಿಸಿದ್ದಾರೆ.
ಅಫ್ಗಾನಿಸ್ತಾನ ನಾಗರಿಕರು ವೈದ್ಯಕೀಯ ಚಿಕಿತ್ಸೆ ಸಲುವಾಗಿ ಭಾರತಕ್ಕೆ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದೂ ಹೇಳಿರುವ ಜೈಶಂಕರ್, ‘ಇದು ಅಫ್ಗನ್ ದೇಶದ ಕಲ್ಯಾಣ, ಸಮೃದ್ಧಿ ಮತ್ತು ಸ್ಥಿರತೆಗಾಗಿ ಭಾರತ ಹೊಂದಿರುವ ಆಳವಾದ ಬದ್ಧತೆಗೆ ಉದಾಹರಣೆಯಾಗಿದೆ’ ಎಂದು ತಿಳಿಸಿದ್ದಾರೆ.
‘ನಮ್ಮ ಜನರ ಸ್ನೇಹವು ಅಫ್ಗಾನಿಸ್ತಾನದೊಂದಿಗೆ ನಾವು ಹೊಂದಿರುವ ಐತಿಹಾಸಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ. ಇದು ಪ್ರಬಲ ಮತ್ತು ಸ್ಥಿರವಾದದ್ದಾಗಿದೆ. ನಾವು ಯಾವಾಗಲೂ ಉತ್ತಮ ನೆರೆ–ಹೊರೆಯವರಾಗಿದ್ದು, ಯಾವಾಗಲೂ ಹಿಗೆಯೇ ಇರುತ್ತೇವೆ’ ಎಂದಿದ್ದಾರೆ.