ಚೆನ್ನೈ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅ.7ರಂದು ಘೋಷಿಸಲಾಗುವುದು ಎಂದು ಎಐಎಡಿಎಂಕೆ ಸೋಮವಾರ ತಿಳಿಸಿದೆ.
ಐದು ಗಂಟೆಗಳ ಕಾಲ ನಡೆದ ಎಐಎಡಿಎಂಕೆ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಮಾತನಾಡಿದ ಪಕ್ಷದ ಉಪ ಸಂಯೋಜಕ ಕೆ.ಪಿ.ಮುನುಸಾಮಿ, ಎಐಎಡಿಎಂಕೆ ನಾಯಕರಾದ ಒ.ಪನ್ನೀರ್ಸೆಲ್ವಂ ಹಾಗೂ ಕೆ.ಪಳನಿಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ ಎಂದರು.
‘ಒ.ಪನ್ನೀರ್ಸೆಲ್ವಂ ಹಾಗೂ ಕೆ.ಪಳನಿಸ್ವಾಮಿ ಇಬ್ಬರಲ್ಲಿ ಯಾರು ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎನ್ನುವ ವಿಷಯ ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆಯಾಗಿದೆ. ಕೊನೆಯಲ್ಲಿ ಮುಂದಿನ ತಿಂಗಳು ಅಧಿಕೃತವಾಗಿ ಈ ಕುರಿತು ಘೋಷಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೂರನೇ ಬಾರಿಗೆ ಅಧಿಕಾರಕ್ಕೇರಲು ಎಲ್ಲರೂ ಜೊತೆಯಾಗಿ ಸಹೋದರರ ರೀತಿಯಲ್ಲಿ ಕಠಿಣ ಪರಿಶ್ರಮದೊಂದಿಗೆ ಕೆಲಸ ಮಾಡಬೇಕು ಎನ್ನುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.