ಅಣಕು ಕಾರ್ಯಾಚರಣೆ ಎಡವಟ್ಟು: ಸಿಎಂ ಯೋಗಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನವದೆಹಲಿ: ಉತ್ತರ ಪ್ರದೇಶ ಸರ್ಕಾರ ಆಗ್ರಾದ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ವಿತರಣೆ ಕುರಿತು ನಡೆದ ‘ಅಣಕು ಕಾರ್ಯಾಚರಣೆ‘ಯ ಹಿಂದಿನ ಸತ್ಯವನ್ನು ಹೊರಗೆಳೆದು, ತಪ್ಪಿತಸ್ಥರನ್ನು ಶಿಕ್ಷಿಸುತ್ತದೆಯೇ? ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟವಾದ ಮಾಧ್ಯಮಗಳ ವರದಿಯ ತುಣುಕುಗಳನ್ನು ಟ್ಯಾಗ್ ಮಾಡಿದ್ದಾರೆ.
ಈ ಅಣಕು ಕಾರ್ಯಾಚರಣೆ ವೇಳೆ ಐದು ನಿಮಿಷಗಳ ಕಾಲ ಆಮ್ಲಜನಕ ಪೂರೈಕೆ ಕಡಿತಗೊಂಡಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರ ಸತ್ಯವನ್ನು ಹೊರಗೆಳೆಯುತ್ತದೆಯೇ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುತ್ತದೆಯೇ? ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ತೀವ್ರವಾಗಿ ಆಮ್ಲಜನಕದ ಕೊರತೆ ಇದ್ದರೂ, ಅಲ್ಲಿನ ಸರ್ಕಾರ ಮಾತ್ರ, ‘ಆಮ್ಲಜನಕ ಕೊರತೆ ಇಲ್ಲ‘ ಎಂದು ಹೇಳುತ್ತಲೇ ಇತ್ತು. ಆಗ್ರಾದ ಜಿಲ್ಲಾಡಳಿತವೂ ಅದಕ್ಕೆ ಧ್ವನಿ ಗೂಡಿಸಿತ್ತು. ಆದರೆ, ರಾಜ್ಯದಾದ್ಯಂತ ಆಮ್ಲಜನಕದ ಕೊರತೆಯಿಂದ ರೋಗಿಗಳು ತೀವ್ರ ಪರಿತಪಿಸಿದರು, ಕೆಲವರು ಪ್ರಾಣ ಕಳೆದುಕೊಂಡರು‘ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
उप्र सरकार ने ऑक्सीजन की भारी कमी के बीच लगातार कहा कि "ऑक्सीजन की कमी नहीं है।"
प्रदेशभर में लोगों की तड़प-तड़प कर जान चली गई। आगरा में भी प्रशासन कह रहा है कि "ऑक्सीजन की कमी नहीं थी"।
क्या उप्र सरकार आगरा मॉकड्रिल का सच सामने लाकर दोषियों को सजा देगी? pic.twitter.com/XVss94fueX
— Priyanka Gandhi Vadra (@priyankagandhi) June 9, 2021
ಆಗ್ರಾದ ಖಾಸಗಿ ಆಸ್ಪತ್ರೆಯಿಂದ ವಿಡಿಯೊ ತುಣಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಗ್ರಾ ಆಡಳಿತ ಪ್ರಕರಣ ಕುರಿತು ತನಿಖೆಗೆ ಆದೇಶಿಸಿತು.
ಆ ವಿಡಿಯೊದಲ್ಲಿ ಖಾಸಗಿ ಆಸ್ಪತ್ರೆಯ ಮಾಲೀಕರು ‘ಅಣಕು ಕಾರ್ಯಾಚರಣೆ‘ ನಡೆಸಿದ್ದಾರೆಂದು ಹೇಳಿದ್ದರು. ಈ ಕಾರ್ಯಾಚರಣೆ ವೇಳೆ ಕೋವಿಡ್ ರೋಗಿಗಳಿಗೆ ಐದು ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಆಮ್ಲಜನಕದ ಪೂರೈಕೆ ಕಡಿತಗೊಳಿಸಿದ ನಂತರ ಕೆಲವು ರೋಗಿಗಳ ದೇಹ ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿವೆ ಎಂಬ ಅಂಶವೂ ವಿಡಿಯೊದಲ್ಲಿ ಇತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.