ತಿರುಪತಿ: ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಪೋಷಕರ ಜತೆ ಬಂದಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ 10 ವರ್ಷದ ಬಾಲಕನೊಬ್ಬ ನ್ಯಾಯಾಲಯದ ಆವರಣದಲ್ಲೇ ಅಸುನೀಗಿದ ಘಟನೆ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಮಂಗಳವಾರ ನಡೆದಿದೆ.
ಹರ್ಷವರ್ಧನ್ ಎಂಬ ಬಾಲಕ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ಚೌಡೆಪಲ್ಲಿ ಮಂಡಲದ ದೆಚುಪಲ್ಲಿ ಗ್ರಾಮದಲ್ಲಿರುವ ತನ್ನ ಮನೆಯ ಟೆರೇಸ್ನಿಂದ ಬಿದ್ದಿದ್ದ ಮತ್ತು ತಲೆಗೆ ಗಾಯವಾಗಿತ್ತು. ಅಂದಿನಿಂದಲೂ ಆತ ಹಾಸಿಗೆಗಷ್ಟೇ ಸೀಮಿತನಾಗಿದ್ದನು ಮತ್ತು ಅವನನ್ನು ಸಾಮಾನ್ಯ ಸ್ಥಿತಿಗೆ ತರಲು ಅವನ ಹೆತ್ತವರು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿದ್ದವು.
ಬಳಿಕ ಕುಟುಂಬವು ತಿರುಪತಿಯ ರುಯಾ ಆಸ್ಪತ್ರೆಯಲ್ಲಿ, ನೆರೆಯ ತಮಿಳುನಾಡಿನ ವೆಲ್ಲೂರು ಮತ್ತು ಇತರ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಬಾಲಕನಿಗೆ ಕಿತ್ಸೆಯನ್ನು ಕೊಡಿಸಿದರು ಕೂಡ ಬಾಲಕನ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿರಲಿಲ್ಲ.
ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲು ಹರ್ಷವರ್ಧನ್ ಅವರ ಪೋಷಕರು ₹ 4 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಮಾಡಿಕೊಂಡಿದ್ದರು. ಆದರೆ ಅದೆಲ್ಲವೂ ವ್ಯರ್ಥವಾಯಿತು. ತಮ್ಮ ಮಗನ ಚಿಕಿತ್ಸೆಗೆ ಹೆಚ್ಚಿನ ಖರ್ಚು ಮಾಡುವ ಸ್ಥಿತಿಯಲ್ಲಿಲ್ಲದ ಕಾರಣ, ಅವರು ಪುಂಗನೂರಿನ ನ್ಯಾಯಾಲಯಕ್ಕೆ ದಯಾಮರಣ ಅರ್ಜಿ ಸಲ್ಲಿಸಲು ಹೋಗಿದ್ದರು.
ಈ ವೇಳೆಯೇ, ಬಾಲಕನು ನ್ಯಾಯಾಲಯದ ಆವರಣದಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.