ರಾಂಚಿ: ಜಾರ್ಖಂಡ್ನ ರಾಂಚಿಯಿಂದ ಮುಂಬೈಗೆ ಹಾರಾಟ ಕೈಗೊಂಡಿದ್ದ ಏರ್ ಏಷ್ಯಾ ವಿಮಾನ (i5–632) ಟೇಕಾಫ್ ಆದ ಮರು ಕ್ಷಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ.
ಟೇಕಾಫ್ ಆಗುವ ವೇಳೆ ವಿಮಾನಕ್ಕೆ ಹಕ್ಕಿಯೊಂದು ಬಡಿದಿದೆ. ಹೀಗಾಗಿ ವಿಮಾನ ಕೂಡಲೇ ಭೂಸ್ಪರ್ಶ ಮಾಡಬೇಕಾಯಿತು. ಸಮಸ್ಯೆ ಸರಿಪಡಿಸಿದ ನಂತರ, ಪ್ರಕ್ರಿಯೆಗಳೆಲ್ಲವನ್ನೂ ಪೂರ್ಣಗೊಳಿಸಿ ವಿಮಾನ ಮುಂಬೈಗೆ ಹಾರಾಟ ಕೈಗೊಂಡಿತು ಎಂದು ಏರ್ಏಷ್ಯಾ ವಕ್ತಾರರು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರೂ ಸೇರಿದಂತೆ ಪ್ರತಿಯೊಬ್ಬರೂ ಕ್ಷೇಮವಾಗಿರುವುದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಮಾನಕ್ಕೆ ಹಕ್ಕಿ ಬಡಿದ ವಿಚಾರವನ್ನು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಶರ್ಮಾ ಖಚಿತ ಪಡಿಸಿದ್ದು, ಘಟನೆಯ ಬಗ್ಗೆ ಸ್ವತಃ ತಾವೇ ಪರಿಶೀಲನೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾಗಿ 18 ಮಂದಿ ಮೃತಪಟ್ಟ ಮರುದಿನವೇ ಈ ಘಟನೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.