ಅಮೃತ್ಪಾಲ್ ಸಿಂಗ್ ನಾಪತ್ತೆ: ಮುಂದುವರಿದ ಶೋಧ ಕಾರ್ಯ, ಬೆಂಗಾವಲು ವಾಹನ ಪತ್ತೆ

ಚಂಡೀಗಡ: ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್ಪಾಲ್ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿಸಿರುವ ಪೊಲೀಸರು ಮತ್ತೆ 34 ಬೆಂಬಲಿಗರನ್ನು ಬಂಧಿಸಿದ್ದಾರೆ. ಜಲಂಧರ್ ಜಿಲ್ಲೆಯಲ್ಲಿ ಆತನ ಬೆಂಗಾವಲು ವಾಹನ ಪತ್ತೆಯಾಗಿದ್ದು, ಅದರಲ್ಲಿ ರೈಫಲ್, ಮದ್ದುಗುಂಡುಗಳು ದೊರೆತಿವೆ.
ಈ ಮಧ್ಯೆ ಅಮೃತ್ಪಾಲ್ನ ಕಾನೂನು ಸಲಹೆಗಾರ ಇಮಾನ್ ಸಿಂಗ್ ಖಾರಾ ಎಂಬುವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಭಾನುವಾರ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಅಮೃತ್ಪಾಲ್ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿರುವ ಅವರು ಆತನನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಕೋರಿದ್ದಾರೆ. ಈ ಕುರಿತು ನ್ಯಾಯಾಲಯವು ಪಂಜಾಬ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಇದೇ 21ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಕಪ್ಪು ಬಣ್ಣದ ಕಾರು ಬಹುಶಃ ಅಮೃತ್ಪಾಲ್ ಸಿಂಗ್ನ ಬೆಂಗಾವಲು ಪಡೆ ವಾಹನವಿರಬಹುದು. ಅದರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರು ಹಿಂದಿನ ದಿನ ವಿಡಿಯೊವೊಂದರಲ್ಲೂ ಕಂಡುಬಂದಿತ್ತು.
‘ಜಲಂಧರ್ನ ಸಲೆಮಾ ಗ್ರಾಮದಲ್ಲಿ ವಾಹನ ಪತ್ತೆಯಾಗಿದ್ದು, ಕೀ ವಾಹನದಲ್ಲಿಯೇ ಇತ್ತು. ಖಾಸಗಿ ವಾಕಿ–ಟಾಕಿ, ಪಾಯಿಂಟ್ 315 ಬೋರ್ ರೈಫಲ್, 57 ಮದ್ದುಗುಂಡುಗಳು, ಕತ್ತಿ, ನೋಂದಣಿ ಫಲಕ ಮತ್ತಿತರ ಪರಿಕರಗಳಿದ್ದವು’ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋಮು ಸಂಘರ್ಷ ಹರಡಲು ಯತ್ನಿಸಿದ್ದ ಆರೋಪದಡಿ, ಖಾಲಿಸ್ತಾನ ಪರ ಸಹಾನೂ
ಭೂತಿ ಹೊಂದಿರುವ ಸಿಖ್ ಮೂಲಭೂತ ವಾದಿ ಪತ್ತೆಗೆ ಶನಿವಾರ ಪೊಲೀಸರು ಶೋಧಕಾರ್ಯ ಆರಂಭಿಸಿದ್ದರು. ಆತನ ಸಂಘಟನೆ ಜೊತೆಗಿದ್ದ 78 ಸದಸ್ಯರನ್ನು ಬಂಧಿಸಿದ್ದರು. ಆತ ಪಲಾಯನ ಮಾಡಿದ್ದ.
ಈತನ ಪತ್ತೆಗೆ ರಾಜ್ಯವ್ಯಾಪಿ ಶೋಧ ಕಾರ್ಯಾಚರಣೆ ನಡೆದಿತ್ತು.
ಅಮೃತ್ಪಾಲ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಆತನ ನೇತೃತ್ವದ ‘ವಾರಿಸ್ ಪಂಜಾಬ್ ದೇ’ (ಡಬ್ಲ್ಯುಪಿಡಿ) ಸಂಘಟನೆಗೆ ಸೇರಿದ ಶಕ್ತಿಗಳು ಕೋಮುಸೌಹಾರ್ದಕ್ಕೆ ಧಕ್ಕೆ ತರಲು ಯತ್ನಿಸಿದ್ದ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಜ್ನಲಾ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದ ಸಂಬಂಧ ಡಬ್ಲ್ಯುಪಿಡಿ ಶಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸಂಬಂಧ ಅಮೃತ್ಪಾಲ್ ಸಿಂಗ್ ಮತ್ತು ಆತನ ಏಳು ಸಹಚರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಮೃತಸರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತಿಂದರ್ ಸಿಂಗ್ ತಿಳಿಸಿದ್ದಾರೆ. ಅಲ್ಲದೆ, ಅಮೃತ್ಪಾಲ್ನ ಹುಟ್ಟೂರು ಅಮೃತಸರದ ಜಲ್ಲೂಪುರ್ ಖೇರಾ ಗ್ರಾಮದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಅಲ್ಲಿ, ಅಮೃತ್ಪಾಲ್ ಸಿಂಗ್ನ ತಂದೆ ತರ್ಸೆಮ್ ಸಿಂಗ್ ಮತ್ತು ಆತನ ಪುತ್ರನನ್ನು ಪೊಲೀಸರು ಬಂಧಿಸಿದ್ದರು. ಜಲಂಧರ್ನಲ್ಲಿ ಪೊಲೀಸ್ ಬ್ಯಾರಿಕೇಡ್ ಅನ್ನು ಮುರಿದ ಪ್ರಕರಣದಲ್ಲಿ ಅಮೃತ್ಪಾಲ್ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಅಸ್ಸಾಂ ಜೈಲಿಗೆ ಪಾಲ್ ಸಹಚರರು
ಚಂಡೀಗಢ/ದಿಬ್ರೂಗಢ: ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್ಪಾಲ್ ಸಿಂಗ್ ನೇತೃತ್ವದ ಸಂಘಟನೆಯ ಸದಸ್ಯರಾಗಿದ್ದ ಬಂಧಿತ ನಾಲ್ವರನ್ನು ಅಸ್ಸಾಂನ ದಿಬ್ರೂಗಢದ ಜೈಲಿಗೆ ಪೊಲೀಸರು ಕರೆದೊಯ್ದಿದ್ದಾರೆ.
ವಿಶೇಷ ವಿಮಾನದಲ್ಲಿ ನಾಲ್ವರನ್ನು ಕರೆತರಲಾಯಿತು. ಅಮೃತಪಾಲ್ ಸಿಂಗ್ ಪತ್ತೆಗೆ ರಾಜ್ಯದಾದ್ಯಂತ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳಾದ ದಲ್ಜಿತ್ ಸಿಂಗ್ ಕಾಲ್ಸಿ, ಭಗವಂತ್ ಸಿಂಗ್, ಗುರ್ಮೀತ್ ಸಿಂಗ್ ಮತ್ತು ‘ಪ್ರಧಾನಮಂತ್ರಿ’ ಬಜೇಕಾ ಎಂಬುವರನ್ನು ದಿಬ್ರೂಗಢ ಜೈಲಿನಲ್ಲಿ ಇಡಲಾಗಿದೆ. ಅವರಿಗೆ ಅಗತ್ಯ ಭದ್ರತೆ ಕಲ್ಪಿಸಲಾಗುತ್ತದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಈ ಮಧ್ಯೆ, ಪಂಜಾಬ್ ಸರ್ಕಾರವು ಅಮೃತಸರ, ಜಲಂಧರ್, ಲೂಧಿಯಾನ ಸೇರಿ ರಾಜ್ಯದ ಹಲವೆಡೆ ಭಾನುವಾರ ಮಧ್ಯಾಹ್ನದವರೆಗೂ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಯನ್ನು ನಿರ್ಬಂಧಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.