ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಒಳಗಡೆ ಬದಲಾವಣೆಯ ಅಗತ್ಯವಿದೆ: ಸೋನಿಯಾ ಗಾಂಧಿ

ಅಕ್ಷರ ಗಾತ್ರ

ಉದಯಪುರ(ರಾಜಸ್ಥಾನ): ಪಕ್ಷದಲ್ಲಿ ಆತ್ಮಾವಲೋಕನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಕಾಂಗ್ರೆಸ್ ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದಲ್ಲಿ ಕೆಲವು ಸಾಂಸ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಪಕ್ಷದ 'ನವ ಸಂಕಲ್ಪ ಚಿಂತನಾ ಶಿಬಿರ’ದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿಯ 'ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ' ಘೋಷಣೆಯನ್ನು ಟೀಕಿಸಿದ್ದಾರೆ. ಈ ಘೋಷಣೆಯ ಅರ್ಥ ಅಲ್ಪಸಂಖ್ಯಾತರನ್ನು 'ಕ್ರೂರವಾಗಿ ನಡೆಸಿಕೊಳ್ಳುವುದು' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಪ್ರಧಾನಿ ಮೋದಿ ಮತ್ತು ಅವರ ಸಹೋದ್ಯೋಗಿಗಳು 'ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ' ಎಂಬ ಅವರ ಘೋಷಣೆಯಿಂದ ನಿಜವಾಗಿಯೂ ಏನನ್ನು ಅರ್ಥೈಸುತ್ತಿದ್ದಾರೆ ಎಂಬುದು ನೋವಿನಿಂದ ಸ್ಪಷ್ಟವಾಗಿದೆ. ಇದರರ್ಥ ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು, ಜನರನ್ನು ನಿರಂತರವಾಗಿ ಭಯ ಮತ್ತು ಅಭದ್ರತೆಯಲ್ಲಿ ಬದುಕುವಂತೆ ಮಾಡುವುದೇ ಆಗಿದೆ. ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಮತ್ತು ನಮ್ಮ ಗಣರಾಜ್ಯದ ಸಮಾನ ನಾಗರಿಕರಾಗಿರುವ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವುದು, ಬಲಿಪಶುಗಳನ್ನಾಗಿ ಮಾಡುವುದು ಹಾಗೂ ಆಗಾಗ್ಗೆ ಅವರ ವಿರುದ್ಧ ಕ್ರೂರವಾಗಿ ವರ್ತಿಸುವುದು ಬಿಜೆಪಿ ನಾಯಕರ ಮಾತಿನ ಅರ್ಥವಾಗಿದೆ’ಎಂದು ಅವರು ಹೇಳಿದ್ದಾರೆ.

‘ಬಿಜೆಪಿ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ನೀತಿಗಳ ಪರಿಣಾಮವಾಗಿ ದೇಶವು ಎದುರಿಸುತ್ತಿರುವ ಹಲವಾರು ಸವಾಲುಗಳ ಕುರಿತಂತೆ ಚರ್ಚಿಸಲು ಇದು ನಮಗೆ ಅವಕಾಶವನ್ನು ನೀಡುತ್ತದೆ. ಇದು ನಮ್ಮ ಮುಂದಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಒಂದು ಸುಸಂದರ್ಭವಾಗಿದೆ. ರಾಷ್ಟ್ರೀಯ ವಿಷಯಗಳ ಬಗ್ಗೆ 'ಚಿಂತನೆ' ಮತ್ತು ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಅರ್ಥಪೂರ್ಣ 'ಆತ್ಮಚಿಂತನೆ' ಎರಡೂ ಮಾಡಬಹುದು. ಪಕ್ಷದ ಸಾಂಸ್ಥಿಕ ಬದಲಾವಣೆಯೂ ಇಂದಿನ ಅಗತ್ಯವಾಗಿದೆ’ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

‘ನಾವು ನಮ್ಮ ಕೆಲಸದ ವಿಧಾನವನ್ನು ಬದಲಾಯಿಸಬೇಕಾಗಿದೆ’ಎಂದು ಸೋನಿಯಾ ಒತ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT