ಕೋಲ್ಕತ್ತ: ರಾಜ್ಯದಲ್ಲಿ ಟಿಎಂಸಿ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮುಂದುವರಿದಿದೆ. ಹೈಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸೂಚನೆಗಳನ್ನು ಕಡೆಗಣಿಸಿ ಅವರು ಕುಕೃತ್ಯ ಮುಂದುವರಿಸಿದ್ದಾರೆ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.
ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿ ಒಂದು ವಾರ ಕಾಲ ಪ್ರತಿಭಟನೆಗೆ ಕರೆ ನೀಡಿದೆ.
ಮೇ 2ರ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಸುಮಾರು 30 ಬಿಜೆಪಿ ಸದಸ್ಯರ ಹತ್ಯೆಯಾಗಿದೆ ಎಂದು ಘೋಷ್ ಹೇಳಿದ್ದಾರೆ.
ಬಿಜೆಪಿ ಯುವಮೋರ್ಚಾ ಸಭೆಯಲ್ಲಿ ಭಾಗವಹಿಸಿದ ದಿಲೀಪ್ ಘೋಷ್, ಆಗಸ್ಟ್ 9 ರಿಂದ 16ರವರೆಗೆ 'ಪಶ್ಚಿಮ ಬಂಗಾಳ ರಕ್ಷಿಸಿ' ರ್ಯಾಲಿಗಳನ್ನು ರಾಜ್ಯದ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ನ್ಯಾಯಾಲಯದ ಆದೇಶ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಧಿಕ್ಕರಿಸಿ ಆಡಳಿತ ಪಕ್ಷದ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಫಲಿತಾಂಶ ನಂತರ ಸಾವಿರಾರು ಬಿಜೆಪಿ ಕಾರ್ಯಕರ್ತರು ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.