ನವದೆಹಲಿ: ಹಿರಿಯ ನಾಗರಿಕರಿಗಾಗಿ ದೆಹಲಿ ಸರ್ಕಾರ ರೂಪಿಸಿರುವ ‘ಉಚಿತ ತೀರ್ಥಯಾತ್ರೆ‘ ಯೋಜನೆಯಲ್ಲಿ ಅಯೋಧ್ಯೆಯನ್ನು ಸೇರಿಸಲು ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಕಟಿಸಿದರು.
ದೆಹಲಿ ಸರ್ಕಾರವು ಹಿರಿಯ ನಾಗರಿಕರಿಗಾಗಿ 'ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ' ಪ್ರಕಟಿಸಿದೆ. ಈ ಯೋಜನೆಯಡಿ ಹಿರಿಯ ನಾಗರಿಕರು ಪುರಿ ಜಗನ್ನಾಥ, ರಾಮೇಶ್ವರಂ, ಶಿರಡಿ, ಮಥುರಾ, ಹರಿದ್ವಾರ, ತಿರುಪತಿ ಸೇರಿದಂತೆ ವಿವಿಧ ಯಾತ್ರಾ ಸ್ಥಳಗಳಿಗೆ ತೆರಳುವ ಪ್ರವಾಸದ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇದೇ ಯೋಜನೆಗೆ ಈಗ ಅಯೋಧ್ಯೆಯನ್ನು ಸೇರಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.
ಕೇಜ್ರಿವಾಲ್ ಅವರು ಮಂಗಳವಾರವಷ್ಟೇ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದರು.
ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಪ್ ಪಕ್ಷ ಕಣಕ್ಕಿಳಿಯಲು ಯೋಜನೆ ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಅಯೋಧ್ಯೆಯನ್ನು ‘ತೀರ್ಥ ಯಾತ್ರಾ ಯೋಜನೆ‘ ವ್ಯಾಪ್ತಿಗೆ ತಂದಿದೆ.
35 ಸಾವಿರ ಮಂದಿ ಯಾತ್ರೆ: ದೆಹಲಿ ಸರ್ಕಾರದ ಈ ಯೋಜನೆಯಡಿಯಲ್ಲಿ ಈಗಾಗಲೇ 35 ಸಾವಿರಕ್ಕೂ ಅಧಿಕ ಹಿರಿಯ ನಾಗರಿಕರು ಉಚಿತ ಯಾತ್ರೆ ಮುಗಿಸಿಕೊಂಡು ಬಂದಿದ್ದಾರೆ. ಕೋವಿಡ್ ಕಾರಣ ಒಂದೂವರೆ ವರ್ಷದಿಂದ ಈ ಯೋಜನೆ ಸ್ಥಗಿತಗೊಂಡಿತ್ತು. ಮತ್ತೆ ಈ ಯೋಜನೆಯ ಆರಂಭಕ್ಕೆ ಸೂಚನೆ ನೀಡಿರುವುದರಿಂದ ಒಂದು ತಿಂಗಳೊಳಗೆ ಮತ್ತೆ ಹಿರಿಯ ನಾಗರಿಕರನ್ನು ಹೊತ್ತ ರೈಲುಗಳು ಯಾತ್ತೆಗೆ ಸಜ್ಜಾಗುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.