ರಾಮಮಂದಿರ ಭಾರತದ ಸ್ವಾಭಿಮಾನದ ಸಂಕೇತವಾಗಲಿದೆ: ಆರ್ಎಸ್ಎಸ್

ಗಾಂಧಿನಗರ(ಗುಜರಾತ್): ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರವು ಭಾರತದ ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತವಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಗುರುವಾರ ಹೇಳಿದೆ.
ಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿ ಪೂಜೆ ಕಾರ್ಯಕ್ರಮವು ಭಾರತದ ಇತಿಹಾಸದಲ್ಲಿ ಮಹತ್ವದ ತಿರುವು ಎಂದೂ ತಿಳಿಸಿದೆ.
ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಆರ್ಎಸ್ಎಸ್ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಆರ್ಎಸ್ಎಸ್ ತನ್ನ ಅಂಗಸಂಸ್ಥೆಗಳ ಮೂಲಕ, ಐದು ಲಕ್ಷ ಗ್ರಾಮಗಳ 10 ಕೋಟಿ ಕುಟುಂಬಗಳನ್ನು ಸಂಪರ್ಕಿಸಿ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲಿದೆ ಎಂದು ಆರ್ಎಸ್ಎಸ್ನ ಮುಖಂಡರು ತಿಳಿಸಿದ್ದಾರೆ.
ಜಾತಿ ತಾರತಮ್ಯ ತೊಡೆದುಹಾಕಲು, ಹಿಂದೂ ಕುಟುಂಬಗಳ ಮೌಲ್ಯಗಳನ್ನು ಪ್ರಚುರಪಡಿಸಲು ಹಾಗೂ ಪರಿಸರ ಸಂರಕ್ಷಣೆಗೆ ದುಡಿಯಲು ಗಾಂಧಿನಗರದ ಉವರ್ಸಾದ್ ಗ್ರಾಮದಲ್ಲಿ ನಡೆದ ಮೂರು ದಿನಗಳ ‘ಚಿಂತನ್ ಶಿಬಿರ’ದಲ್ಲಿ ಆರ್ಎಸ್ಎಸ್ ನಿರ್ಧರಿಸಿದೆ.
ಶಿಬಿರದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಭಯ್ಯಾಜಿ ಜೋಷಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಂಘ ಪರಿವಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ 34 ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.