ಲಖನೌ: ಸಮಾಜವಾದಿ ಪಕ್ಷದ (ಎಸ್.ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಜೊತೆಗಿದ್ದವರನ್ನು ಮತ್ತು ಮುಸ್ಲಿಂ ಸಮುದಾಯದವರನ್ನು ನಿರ್ಲಕ್ಷಿಸಿದ್ದಾರೆ ಎಂದು ಸೆರೆವಾಸ ಅನುಭವಿಸುತ್ತಿರುವ ಎಸ್.ಪಿ. ನಾಯಕ ಆಜಂ ಖಾನ್ ಅವರ ವಕ್ತಾರ ಫಸಾಹತ್ ಅಲಿ ಖಾನ್ ಆರೋಪಿಸಿದ್ದಾರೆ.
ಎರಡೂವರೆ ವರ್ಷಗಳಲ್ಲಿ ಅಖಿಲೇಶ್ ಯಾದವ್ ಅವರು ಒಂದು ಬಾರಿ ಮಾತ್ರ ಆಜಂ ಖಾನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ. ಅವರ ಬಿಡುಗಡೆಗೆ ಪಕ್ಷವು ಯಾವುದೇ ಪ್ರಯತ್ನ ಮಾಡಿಲ್ಲ ಎಂದೂ ಆರೋಪ ಮಾಡಿದ್ದಾರೆ.
ರಾಮ್ಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಫಸಾಹತ್ ಅಲಿ ಖಾನ್ ಅವರು ಈ ಹೇಳಿಕೆ ನೀಡಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಅಖಿಲೇಶ್ ಅವರಿಗೆ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಮತ ಹಾಕಿದ್ದರೂ ಅವರು ಮುಸ್ಲಿಂ ಸಮುದಾಯದ ಪರವಾಗಿ ಒಂದು ಮಾತೂ ಆಡಿಲ್ಲ ಎಂದೂ ಫಸಾಹತ್ ಅಲಿ ಖಾನ್ ಹೇಳಿದ್ದಾರೆ.
ಇದು ನನ್ನ ವೈಯಕ್ತಿಕ ನೋವು ಎಂದಿರುವ ಅವರು, ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದು ಆಜಂ ಖಾನ್ ಅವರಿಗೆ ತಿಳಿಸುವುದಾಗಿ ಹೇಳಿದ್ದಾರೆ.