ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಹಾಗೆ ನೋಡಿದರೆ, ಹಲವು ಸಂಸದರು, ಶಾಸಕರು ಸಹ ಇದೇ ರೀತಿ ತಮ್ಮ ಚುನಾಯಿತ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆ ಸಾಲಿನಲ್ಲಿ ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾಗಾಂಧಿ ಸಹ ಇದ್ದಾರೆ.
ಹೌದು, 1975ರಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಇಂದಿರಾ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿ ದೇಶವೇ ತಿರುಗಿ ನೋಡುವಂತಹ ತೀರ್ಪು ನೀಡಿದ್ದರು. ಆ ದಿಟ್ಟ ತೀರ್ಪು ತುರ್ತು ಪರಿಸ್ಥಿತಿಯ ಘೋಷಣೆಗೆ ನೇರವಾಗಿ ಕಾರಣವಾಯಿತು ಎಂದು ಹೇಳಲಾಗುತ್ತದೆ.
ಚುನಾವಣಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ದೋಷಿ ಎಂದು ಘೋಷಿಸಿದ್ದ ನ್ಯಾಯಮೂರ್ತಿ, ಜನಪ್ರತಿನಿಧಿ ಕಾಯಿದೆಯ ಅಡಿಯಲ್ಲಿ 6 ವರ್ಷಗಳ ಕಾಲ ಯಾವುದೇ ಚುನಾಯಿತ ಹುದ್ದೆಯಲ್ಲಿ ಮುಂದುವರಿಯದಂತೆ ತಡೆ ಹಾಕಿದ್ದರು.
2019ರಲ್ಲಿ ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಆರೋಪ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಗುರುವಾರ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ, ಶುಕ್ರವಾರ ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಇವನ್ನೂ ಓದಿ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.