ಶುಕ್ರವಾರ, ಮಾರ್ಚ್ 31, 2023
33 °C

ಯಾತ್ರೆ ದಕ್ಷಿಣದಿಂದ ಉತ್ತರಕ್ಕೆ ಸಾಗಿದೆಯಾದರೂ ಪರಿಣಾಮ ರಾಷ್ಟ್ರವ್ಯಾಪಿ: ರಾಹುಲ್

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಂಗ್ರೆಸ್‌ ಪಕ್ಷವು ನಡೆಸಿದ ಭಾರತ್‌ ಜೋಡೊ ಯಾತ್ರೆಯು ದೇಶದ ದಕ್ಷಿಣ ಭಾಗದಿಂದ ಉತ್ತರಕ್ಕೆ ಸಾಗಿದೆ. ಆದರೆ, ಅದರ ಪರಿಣಾಮ ರಾಷ್ಟ್ರವ್ಯಾಪಿಯಾಗಿದೆ. ಈ ಯಾತ್ರೆಯು ದೇಶಕ್ಕೆ ಪರ್ಯಾಯ ದೃಷ್ಟಿಕೋನವನ್ನು ನೀಡಿದೆ ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್‌ 7ರಂದು ಆರಂಭವಾದ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿದ್ದು, ಇಲ್ಲಿನ ಲಾಲ್‌ ಚೌಕ್‌ನಲ್ಲಿ ಜನವರಿ 29ರಂದು (ಭಾನುವಾರ) ತ್ರಿವರ್ಣ ಧ್ವಜಾರೋಹಣ ನಡೆಸುವುದರೊಂದಿಗೆ ಮುಕ್ತಾಯಗೊಂಡಿದೆ. ಬಳಿಕ ಸುದ್ದಿಗಾರರಗೊಂದಿಗೆ ಮಾತನಾಡಿದ ರಾಹುಲ್‌, '4,000 ಕಿ.ಮೀ ಪ್ರಯಾಣದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ. ಇದು ನನ್ನ ಬದುಕಿನ ಅತ್ಯಂತ ಸುಂದರವಾದ ಹಾಗೂ ಗಾಢವಾದ ಅನುಭವ' ಎಂದು ಹೇಳಿಕೊಂಡಿದ್ದಾರೆ.

'ನಾನು ಲಕ್ಷಾಂತರ ಜನರನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ. ಅದನ್ನೆಲ್ಲ ನಿಮಗೆ ಅರ್ಥೈಸಲು ನನ್ನಲ್ಲಿ ಪದಗಳಿಲ್ಲ. ಭಾರತವನ್ನು ಒಗ್ಗೂಡಿಸುವುದು ಯಾತ್ರೆಯ ಉದ್ದೇಶವಾಗಿತ್ತು. ಇದು ದೇಶದಾದ್ಯಂತ ಹರಡುತ್ತಿರುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧವಾಗಿತ್ತು. ನಮಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಅಂತಹ ಪ್ರೀತಿಪೂರ್ವಕ ಪ್ರತಿಕ್ರಿಯೆಯನ್ನು ಯಾರೊಬ್ಬರೂ ಊಹಿಸಿರಲಿಲ್ಲ. ನಾವು ಭಾರತೀಯರ ಗಟ್ಟಿತನ, ಸಾಮರ್ಥ್ಯವನ್ನು ನೇರವಾಗಿ ನೋಡಿದ್ದೇವೆ' ಎಂದಿ‌‌ದ್ದಾರೆ.

ಇದನ್ನೂ ಓದಿ: 

ಮುಂದಿನ ದಿನಗಳಲ್ಲಿ ದೇಶದ ಪೂರ್ವ ಭಾಗದಿಂದ ಪಶ್ಚಿಮಕ್ಕೆ ಯಾತ್ರೆ ನಡೆಸುವಿರಾ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, 'ಇದು (ಭಾರತ್‌ ಜೋಡೊ ಯಾತ್ರೆ) ಈಗಷ್ಟೇ ಮುಗಿದಿದೆ. ಹಾಗಾಗಿ, ಈ ಪ್ರಶ್ನೆ ಸಮಂಜಸವಲ್ಲ. ಯಾತ್ರಿಗಳು ಸಾವಿರಾರು ಕಿ.ಮೀ. ನಡೆದಿದ್ದಾರೆ. ಏನಾಗುತ್ತದೆ ನೋಡೋಣ. ಸದ್ಯದ ಯಾತ್ರೆಯು ದಕ್ಷಿಣದಿಂದ ಉತ್ತರಕ್ಕೆ ಸಾಗಿರಬಹುದು. ಆದರೆ, ಅದರೆ ಪರಿಣಾಮ ರಾಷ್ಟ್ರವ್ಯಾಪಿಯಾದದ್ದು. ಇದು ದೇಶಕ್ಕೆ ಒಂದು ದೃಷ್ಟಿಕೋನವ ನೀಡಿದೆ. ಕಾಂಗ್ರೆಸ್‌ ಕಾರ್ಯಕರ್ತರು ಹಲವು ರಾಜ್ಯಗಳಲ್ಲಿ ಪಾದಯಾತ್ರೆ ನಡೆಸಿದ್ದಾರೆ. ನಾವು ಈ (ಪೂರ್ವದಿಂದ ಪಶ್ಚಿಮ ಯಾತ್ರೆ) ಬಗ್ಗೆ ಯೋಚಿಸುತ್ತೇವೆ. ನನ್ನಲ್ಲೂ ಎರಡು–ಮೂರು ಆಲೋಚನೆಗಳಿವೆ' ಎಂದು ತಿಳಿಸಿದ್ದಾರೆ. ಆ ಮೂಲಕ ಮತ್ತೊಂದು ಯಾತ್ರೆ ನಡೆಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

ಭಾರತ್‌ ಜೋಡೊ ಯಾತ್ರೆಯ ಸಮಾರೋಪ ಇಂದು (ಸೋಮವಾರ) ನಡೆಯಲಿದೆ. ಈ ಬಗ್ಗೆ ಹೇಳಿರುವ ರಾಹುಲ್, 'ಇದು ಮುಕ್ತಾಯವಲ್ಲ, ಆರಂಭ. ಇದು ನಮ್ಮ ಮೊದಲ ಹೆಜ್ಜೆ. ಈ ಯಾತ್ರೆಯು ಕೇವಲ ಕಾಂಗ್ರೆಸ್‌ ಪಕ್ಷದ ಯಾತ್ರೆಯಾಗಿ ಉಳಿದಿಲ್ಲ. ಏಕೆಂದರೆ, ಸಾಕಷ್ಟು ಮಂದಿ ಬೇರೆಬೇರೆ ಪಕ್ಷದವರು, ಮಹಿಳೆಯರು, ಜನಸಾಮಾನ್ಯರು ಭಾಗವಹಿಸಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಭಾರತ್‌ ಜೋಡೊ ಯಾತ್ರೆಯು ದೇಶಕ್ಕೆ ಪರ್ಯಾಯ ದೃಷ್ಟಿಕೋನವನ್ನು ನೀಡಿದೆ' ಎಂದಿರುವ ಅವರು, ದೇಶದ ಮುಂದೆ ಸದ್ಯ ಎರಡು ದೃಷ್ಟಿಕೋನಗಳಿವೆ ಎಂದು ತಿಳಿಸಿದ್ದಾರೆ. 'ಒಂದು, ದ್ವೇಷ ಮತ್ತು ದಾರ್ಷ್ಟ್ಯ ಹರಡುವ ಬಿಜೆಪಿ–ಆರ್‌ಎಸ್‌ಎಸ್‌ ಅವರ ದೃಷ್ಟಿಕೋನ. ಮತ್ತೊಂದು, ದ್ವೇಷವೇ ತುಂಬಿರುವ ಮಾರುಕಟ್ಟೆಯಲ್ಲಿ ಪ್ರೀತಿಯ ಮಳಿಗೆ ತೆರೆಯುವ, ಪರಸ್ಪರ ಗೌರವ, ಸಹೋದರತ್ವ ಹಂಚುವ ನಮ್ಮ ದೃಷ್ಟಿಕೋನ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 

'ಒಂದು ದೃಷ್ಟಿಕೋನ ಜನರನ್ನು ದಮನ ಮಾಡುತ್ತದೆ. ಮತ್ತೊಂದು ಒಗ್ಗೂಡಿಸುತ್ತದೆ. ಇದು ರಾಜಕೀಯದ ಮೇಲೆ ಅಗಾಧ ಪರಿಣಾಮ ಉಂಟುಮಾಡಲಿದೆ. ಆದರೆ, ಅದನ್ನು ನಿಖರವಾಗಿ ಹೇಳಲಾರೆ' ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು