ಅಹಮದಾಬಾದ್: ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್(59) ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾದರು.
ಮುಖ್ಯಮಂತ್ರಿ ಭೂಪೇಂದ್ರ ಅವರಿಗೆ ಭಾಯ್ (ಸೋದರ) ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. 'ಹಲವು ವರ್ಷಗಳಿಂದ ನಾನು ಅವರನ್ನು ಬಲ್ಲೆ ಹಾಗೂ ಬಿಜೆಪಿ ಸಂಘಟನೆಯಲ್ಲಾಗಲಿ ಅಥವಾ ಸಾರ್ವಜನಿಕ ಆಡಳಿತದಲ್ಲಿ ಹಾಗೂ ಸಮೂಹ ಸೇವೆಗಳಲ್ಲಿ ಅವರು ನಡೆಸಿರುವ ಮಾದರಿಯ ಕಾರ್ಯಕ್ರಮಗಳನ್ನು ಕಂಡಿದ್ದೇನೆ. ಅವರು ಗುಜರಾತ್ನ ಅಭಿವೃದ್ಧಿ ಪ್ರಕ್ರಿಯೆಯನ್ನು ಖಂಡಿತವಾಗಿಯೂ ಉನ್ನತೀಕರಿಸಲಿದ್ದಾರೆ' ಎಂದು ಟ್ವೀಟಿಸಿದ್ದಾರೆ.
Congratulations to Bhupendra Bhai on taking oath as CM of Gujarat. I have known him for years and have seen his exemplary work, be it in the BJP Organisation or in civic administration and community service. He will certainly enrich Gujarat’s growth trajectory. @Bhupendrapbjp
— Narendra Modi (@narendramodi) September 13, 2021
ವಿಜಯ ರೂಪಾಣಿ ಅವರು ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಭೂಪೇಂದ್ರ ಅವರನ್ನು ಸ್ಥಾನಕ್ಕೆ ಆಯ್ಕೆ ಮಾಡಿತು. ಗುಜರಾತ್ ವಿಧಾನಸಭೆಗೆ 2022ರ ಡಿಸೆಂಬರ್ನಲ್ಲಿ ಚುನಾವಣೆ ನಡೆಯಬೇಕಿದೆ.
ಭೂಪೇಂದ್ರ ಪಟೇಲ್ ಅವರು ತಳಮಟ್ಟದಿಂದ ಹಂತ ಹಂತವಾಗಿ ಬೆಳೆದವರು. ನಗರಸಭೆಯಿಂದ ತಮ್ಮ ರಾಜಕೀಯ ಆರಂಭಿಸಿದವರು. 2017ರಲ್ಲಿ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆ ಎದುರಿಸಿದರು. ಆದರೆ, ಆ ಚುನಾವಣೆಯಲ್ಲಿ ಗರಿಷ್ಠ ಅಂತರದಲ್ಲಿ ಗೆದ್ದರು. ಅವರ ಗೆಲುವಿನ ಅಂತರ 1.17 ಲಕ್ಷ ಮತಗಳು.
ಹತ್ತಿರದವರು ಅವರನ್ನು ‘ದಾದಾ’ ಎಂದು ಕರೆಯುತ್ತಾರೆ. ಗುಜರಾತಿನ ಮಾಜಿ ಮುಖ್ಯಮಂತ್ರಿ ಮತ್ತು ಉತ್ತರ ಪ್ರದೇಶ ರಾಜ್ಯಪಾಲೆ ಆಗಿರುವ ಆನಂದಿಬೆನ್ ಪಟೇಲ್ ಅವರಿಗೆ ಭೂಪೇಂದ್ರ ಅವರು ನಿಕಟವರ್ತಿ. ಹಿಂದೆ ಆನಂದಿಬೆನ್ ಅವರು ಪ್ರತಿನಿಧಿಸಿದ್ದ ವಿಧಾನಸಭಾ ಕ್ಷೇತ್ರದಿಂದಲೇ ಭೂಪೇಂದ್ರ ಅವರೂ ಗೆದ್ದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿನಿಧಿಸುವ ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ ಈ ಕ್ಷೇತ್ರ.
ಭೂಪೇಂದ್ರ ಅವರು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 2015–17ರ ಅವಧಿಯಲ್ಲಿ ಕೆಲಸ ಮಾಡಿದ್ದರು. ಅದಕ್ಕೂ ಮೊದಲು ಅಹಮದಾಬಾದ್ ನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. 2010ರಿಂದ 2015ರವರೆಗೆ ಈ ಹುದ್ದೆಯಲ್ಲಿ ಅವರು ಇದ್ದರು.
Union Home Minister Amit Shah congratulates the new CM of Gujarat, Bhupendra Patel after the sworn-in ceremony.
— ANI (@ANI) September 13, 2021
CMs of BJP ruled states, including Haryana CM Manohar Lal Khattar, Madhya Pradesh CM Shivraj Singh Chouhan, Goa CM Pramod Sawant were also present in the ceremony. pic.twitter.com/BR0v9CxZNp
ಭೂಪೇಂದ್ರ ಅವರು ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸದಾ ಹಸನ್ಮುಖಿ ಮತ್ತು ತಳಮಟ್ಟದ ಕಾರ್ಯಕರ್ತರ ಜತೆಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ. ಸ್ಥಳೀಯ ರಾಜಕಾರಣದಲ್ಲಿ ಹೆಚ್ಚು ಸಕ್ರಿಯವಾಗಿ ಇದ್ದದ್ದು ಇದಕ್ಕೆ ಕಾರಣ. ಅಹಮದಾಬಾದ್ ಜಿಲ್ಲೆಯಲ್ಲಿರುವ ಮೇಮ್ನಗರ ನಗರಸಭೆಯ ಸದಸ್ಯರಾಗಿದ್ದರು. ಎರಡು ಬಾರಿ ಅಧ್ಯಕ್ಷರೂ ಆಗಿದ್ದರು. ಪಟೇಲ್ ಸಮುದಾಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಉದ್ದೇಶಕ್ಕೆ ಸ್ಥಾಪಿತವಾದ ಸರ್ದಾರ್ಧಾಮ್ ವಿಶ್ವ ಪಾಟೀದಾರ್ ಕೇಂದ್ರದ ಟ್ರಸ್ಟಿಯಾಗಿಯೂ ಅವರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.