ಕೋಲ್ಕತ್ತ: ಪ್ರತೀಕಾರದ ರಾಜಕಾರಣಕ್ಕೆ ಪಶ್ಚಿಮ ಬಂಗಾಳದೊಳಗೆ ಪ್ರವೇಶವಿಲ್ಲ ಎಂದು ಹೇಳುವ ಮೂಲಕ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಮೇದಿನಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಗುರುವಾರ ಮಾತನಾಡಿರುವ ಅವರು, 'ಬಿಜೆಪಿಯು ದಂಗೆಕೋರರ ಪಕ್ಷವಾಗಿದೆ. ಹಿಂಸೆ ಮತ್ತು ರಕ್ತಪಾತಗಳನ್ನು ನಾವು ಬಯಸುವುದಿಲ್ಲ. ಪ್ರತೀಕಾರದ ರಾಜಕಾರಣವನ್ನು ಬಂಗಾಳದೊಳಗೆ ಪ್ರವೇಶಿಸಲು ನಾವು ಬಿಡುವುದಿಲ್ಲ' ಎಂದು ತಿಳಿಸಿದ್ದಾರೆ.
'ಚುನಾವಣೆಯ ಸಮಯದಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ರಾಜ್ಯವು ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಅವರು ಗೈರಾಗಿದ್ದರು' ಎಂದು ಮಮತಾ ಹರಿಹಾಯ್ದಿದ್ದಾರೆ.
'ಚುನಾವಣೆ ಹತ್ತಿರವಾಗುತ್ತಿದಂತೆ ಬಿಜೆಪಿ ನಾಯಕರು ಹೆಲಿಕಾಪ್ಟರ್ಗಳು ಮತ್ತು ವಿಮಾನಗಳಲ್ಲಿ ರಾಜ್ಯಕ್ಕೆ ಬರುತ್ತಿದ್ದಾರೆ. ಮತದಾರರಿಗೆ ಆಮಿಷವೊಡ್ಡಲು ಮತ್ತು ಮತಗಳನ್ನು ಲೂಟಿ ಮಾಡಲು ದುಡ್ಡು ತುಂಬಿದ ಚೀಲಗಳೊಂದಿಗೆ ಅವರು ಆಗಮಿಸುತ್ತಾರೆ' ಎಂದು ಟಿಎಂಸಿ ನಾಯಕಿ ಆರೋಪಿಸಿದ್ದಾರೆ.
'ಚಂಡಮಾರುತದ ಸಂತ್ರಸ್ತರಿಗಾಗಿ ಟಿಎಂಸಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳ ಪರಿಹಾರ ನೀಡಿತು. ನಾವು ಸಂಕಷ್ಟದಲ್ಲಿರುವ ಜನರಿಗಾಗಿ ಧಾವಿಸಿದೆವು. ಆಗ ಬಿಜೆಪಿ ನಾಯಕರು ಎಲ್ಲಿದ್ದರು? ಮನುಷ್ಯರು ನೋವು ಅನುಭವಿಸುತ್ತಿರುವ ಸಂದರ್ಭಗಳಲ್ಲಿ ಅವರು ಇರುವುದೇ ಇಲ್ಲ' ಎಂದು ಮಮತಾ ಟೀಕಿಸಿದ್ದಾರೆ.
294 ವಿಧಾನಸಭಾ ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ಮತದಾನ ನಡೆಯಲಿದೆ.