ನವದೆಹಲಿ: ‘ಸಂಸತ್ ಕಲಾಪಗಳಲ್ಲಿ ಬಿಜೆಪಿ ಸಂಸದರು ತಪ್ಪದೇ ಪಾಲ್ಗೊಳ್ಳಬೇಕು. ಒಂದು ವೇಳೆ ಅವರು ತಮ್ಮಲ್ಲಿ ಪರಿವರ್ತನೆ ತಂದುಕೊಳ್ಳದಿದ್ದರೆ, ಕಾಲವೇ ಬದಲಾವಣೆ ತರುತ್ತದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು’ ಎಂದು ಮೂಲಗಳು ತಿಳಿಸಿವೆ.
ಇಲ್ಲಿನ ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕೆಲ ಸಂಸದರು ಕಲಾಪಕ್ಕೆ ಗೈರು ಆಗುತ್ತಿರುವ ಕುರಿತು ಪ್ರಸ್ತಾಪಿಸಿದರು. ಇದೇ ಮೊದಲ ಬಾರಿಗೆ ಸಂಸತ್ ಭವನ ಬದಲಾಗಿ ಬೇರೆ ಸ್ಥಳದಲ್ಲಿ ಸಂಸದೀಯ ಪಕ್ಷದ ಸಭೆಯನ್ನು ಆಯೋಜಿಸಲಾಗಿದೆ.
‘ಯಾವುದೇ ಒಂದು ವಿಷಯ ಕುರಿತು ಮಕ್ಕಳಿಗೆ ಪದೇಪದೇ ಹೇಳಿದಾಗ ಅವರು ತಿದ್ದಿಕೊಳ್ಳುತ್ತಾರೆ. ವಿಷಯವನ್ನು ಪುನರಾವರ್ತನೆ ಮಾಡುವುದೂ ಇಲ್ಲ ಎಂಬುದಾಗಿ ಅವರು ಸಂಸದರಿಗೆ ಕಿವಿಮಾತು ಹೇಳಿದರು’ ಎಂದು ಇವೇ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಎಲ್ಲ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವಂತೆ ಪ್ರಧಾನಿ ಸೂಚಿಸಿದರು’ ಎಂದು ಹೇಳಿದರು.
ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಘಟಕ ಹಾಗೂ ಮಂಡಲಗಳ ಅಧ್ಯಕ್ಷರನ್ನು ಚಹಾಕೂಟಕ್ಕೆ ಆಹ್ವಾನಿಸಿ. ಅವರೊಂದಿಗೆ ಸಂವಾದ ನಡೆಸಿ ಎಂಬುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಸದರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.