ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ, ಮುರುಳಿ ಮನೋಹರ ಜೋಶಿಯವರಂಥ ಅನುಭವಿ ನಾಯಕರು ಮತ್ತು ಕೇಂದ್ರ ಸಚಿವರನ್ನೊಳಗೊಂಡಂತೆ 80 ಜನರ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗುರುವಾರ ಪ್ರಕಟಿಸಿದರು.
ಈ ಕಾರ್ಯಕಾರಿಣಿಯಲ್ಲಿ 80 ಸಾಮಾನ್ಯ ಸದಸ್ಯರ ಜೊತೆಗೆ, 50 ವಿಶೇಷ ಆಹ್ವಾನಿತರು ಮತ್ತು 170 ಕಾಯಂ ಆಹ್ವಾನಿತರ ಸದಸ್ಯರೂ ಇರಲಿದ್ದಾರೆ.ಎಕ್ಸಿಕ್ಯೂಟಿವ್ ಕಮಿಟಿಯಲ್ಲಿ ಪ್ರಲ್ಹಾದ ಜೋಶಿ, ನಿರ್ಮಲಾ ಸೀತರಾಮನ್ ಗೆ ಕರ್ನಾಟಕದಿಂದ ಪ್ರಾತಿನಿಧ್ಯ ಸಿಕ್ಕಿದೆ.
ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಪ್ರಮುಖ ವಿಚಾರಗಳ ಜೊತೆಗೆ, ಸರ್ಕಾರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಚರ್ಚಿಸುತ್ತದೆ. ಹಾಗೆಯೇ ಪಕ್ಷದ ಸಂಘಟನೆಗೆ ಅಗತ್ಯವಾದ ಕಾರ್ಯಸೂಚಿಯನ್ನು ರೂಪಿಸುತ್ತದೆ.
ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು ನಿರೀಕ್ಷೆಯಂತೆ ಈ ಪಟ್ಟಿಯಲ್ಲಿದ್ದಾರೆ. ಜತೆಗೆ ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವ ಅಶ್ವಿನಿ ವೈಷ್ಣವ್ ಅವರೂ ಇದ್ದಾರೆ.
ಹಾಲಿ ಸಚಿವರಲ್ಲದೇ, ಮಾಜಿ ಸಚಿವರಾದ ಹರ್ಷವರ್ಧನ್, ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಕೂಡ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಉಳಿದಿದ್ದಾರೆ.