ಅಂಬಾನಿ ನಿವಾಸಕ್ಕೆ ಬಾಂಬ್ ಬೆದರಿಕೆ: ಪ್ರದೀಪ್ ಶರ್ಮಾಗೆ ಜಾಮೀನು ಇಲ್ಲ

ಮುಂಬೈ (ಪಿಟಿಐ): ಉದ್ಯಮಿ ಮುಖೇಶ್ ಅಂಬಾನಿ ಮನೆ ‘ಎಂಟಿಲೀಯಾ’ಗೆ ಬಾಂಬ್ ಇಟ್ಟಿರುವ ಬೆದರಿಕೆ ಹಾಕಿದ್ದ ಮತ್ತು ಉದ್ಯಮಿ ಮನ್ಸುಖ್ ಹಿರೆನ್ ಕೊಲೆ ಪ್ರಕರಣಗಳಲ್ಲಿನ ಬಂಧಿತ ಆರೋಪಿ, ಮಾಜಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಶರ್ಮ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಇದಕ್ಕೂ ಮೊದಲು ಶರ್ಮ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ವಿಶೇಷ ನ್ಯಾಯಾಲಯವು 2022ರ ಫೆಬ್ರುವರಿಯಲ್ಲಿ ತಿರಸ್ಕರಿಸಿತ್ತು. ಇದನ್ನು ಶರ್ಮ ಪ್ರಶ್ನಿಸಿ, ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೆರೆ ಮತ್ತು ಆರ್.ಎನ್. ಲಡ್ಡಾ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿದೆ.
ಸ್ಫೋಟಕ ತುಂಬಿದ್ದ ಎಸ್ಯುವಿ ವಾಹನ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈನ ನಿವಾಸ ‘ಎಂಟಿಲೀಯಾ’ ಬಳಿ 2021ರ ಫೆಬ್ರುವರಿ 25ರಂದು ಪತ್ತೆಯಾಗಿತ್ತು. ಈ ವಾಹನವು ಹಿರೆನ್ ಅವರಿಗೆ ಸೇರಿದ್ದಾಗಿತ್ತು. ಹಿರೆನ್ ಅವರ ಮೃತದೇಹವು 2022ರ ಮಾರ್ಚ್ನಲ್ಲಿ ಥಾಣೆಯಲ್ಲಿ ಪತ್ತೆಯಾಗಿತ್ತು.
ಹಿರೆನ್ ಕೊಲೆಯ ಸಂಚುಕೋರರಲ್ಲಿ ಒಬ್ಬನಾದ ಶರ್ಮನನ್ನು ಎನ್ಐಎ ಬಂಧಿಸಿತ್ತು. ಹಿರೆನ್ ಕೊಲೆಗೆ ಶರ್ಮ ತಮ್ಮ ಮಾಜಿ ಸಹೋದ್ಯೋಗಿ ಸಚಿನ್ ವಾಝೆಗೆ ಸಹಕರಿಸಿರುವ ಆರೋಪವನ್ನು ಎನ್ಐಎ ಹೊರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.