ಗುಲ್ಶನ್ ಕುಮಾರ್ ಕೊಲೆ ಪ್ರಕರಣ: ರವೂಫ್ಗೆ ಜೀವಾವಧಿ ಶಿಕ್ಷೆ

ಮುಂಬೈ: ‘ಕ್ಯಾಸೆಟ್ ಕಿಂಗ್’ ಗುಲ್ಶನ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಂದ ಪ್ರಮುಖ ಆರೋಪಿ ಅಬ್ದುಲ್ ರವೂಫ್ ಮರ್ಚೆಂಟ್ ಅಪರಾಧಕ್ಕೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಇಪ್ಪತ್ನಾಲ್ಕು ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಮ್ಯೂಸಿಕ್ ಲೇಬಲ್ ಮಾಲೀಕ ರಮೇಶ್ ತೌರಾನಿಯನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಇನ್ನೊಬ್ಬ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಎಸ್.ಎಸ್. ಜಾಧವ್ ಮತ್ತು ಎನ್.ಆರ್. ಬೋರ್ಕರ್ ಅವರ ವಿಭಾಗೀಯ ಪೀಠವು ರದ್ದುಪಡಿಸಿತು. ರವೂಫ್ ಸಹೋದರ ಅಬ್ದುಲ್ ರಶೀದ್ ಮರ್ಚೆಂಟ್ಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ರಮೇಶ್ ತೌರಾನಿಯವರನ್ನು ಖುಲಾಸೆಗೊಳಿಸುವ ಜತೆಗೆ ಮಹಾರಾಷ್ಟ್ರ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿತು. ರಶೀದ್ ಶರಣಾಗಲು ವಿಫಲವಾದರೆ, ಸೆಷನ್ಸ್ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಬಹುದು ಎಂದು ಪೀಠ ಹೇಳಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಅಬ್ದುಲ್ ರವೂಫ್ ಮರ್ಚೆಂಟ್ ಅಲಿಯಾಸ್ ದೌಡ್ ಮರ್ಚೆಂಟ್ನ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ‘ರವೂಫ್ ಎರಡು ಬಾರಿ ಪರಾರಿಯಾಗಿದ್ದಾನೆ. ಆತ ಯಾವುದೇ ಕ್ಷಮೆಗೆ ಅರ್ಹನಲ್ಲ’ ಎಂದು ನ್ಯಾಯಾಲಯ ಹೇಳಿದೆ.
41ರ ಹರೆಯದ ಗುಲ್ಶನ್ ಕುಮಾರ್ ಅವರನ್ನು 1997ರ ಆಗಸ್ಟ್ನಲ್ಲಿ ಮುಂಬೈ ಉಪನಗರ ಅಂಧೇರಿಯ ಜೀತ್ ನಗರದ ಜೀತೇಶ್ವರ ಮಹಾದೇವ ದೇವಾಲಯದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಅವರ ಪ್ರತಿಸ್ಪರ್ಧಿಗಳು ಅವರನ್ನು ಇಲ್ಲವಾಗಿಸಲು ಭೂಗತ ಪಾತಕಿ ಅಬು ಸಲೀಂಗೆ ಸುಪಾರಿ ನೀಡಿದ್ದರು. ಪ್ರಕರಣದ ವಿಚಾರಣೆ ವೇಳೆ 2002ರ ಏಪ್ರಿಲ್ 29ರಂದು ಸೆಷನ್ಸ್ ನ್ಯಾಯಾಲಯವು 19 ಆರೋಪಿಗಳಲ್ಲಿ 18 ಮಂದಿಯನ್ನು ಖುಲಾಸೆಗೊಳಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.