ಕೋಲ್ಕತ್ತ: ನಾರದ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಟಿಎಂಸಿಯ ಇಬ್ಬರು ಸಚಿವರು, ಒಬ್ಬ ಶಾಸಕ ಸೇರಿದಂತೆ ನಾಲ್ಕು ಜನರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ ಹಾಗೂ ಮಾಜಿ ಸಚಿವ ಸೋವನ್ ಚಟರ್ಜಿಗೆ ಜಾಮೀನು ನೀಡಲಾಗಿದೆ. ಅವರ ವಕೀಲರ ವಾದ ಕೇಳಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನುಪಮ್ ಮುಖರ್ಜಿ, ನಾಲ್ವರು ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದರು.
ನಾಲ್ವರು ಮುಖಂಡರನ್ನು ಕೋಲ್ಕತ್ತದಲ್ಲಿನ ಅವರವರ ಮನೆಯಿಂದಲೇ ಬಂಧಿಸಿ, ನಿಜಾಮ್ ಪ್ಯಾಲೇಸ್ನ ಸಿಬಿಐ ಕಚೇರಿಗೆ ಕರೆತರಲಾಗಿತ್ತು. ವರ್ಚುವಲ್ ಮೋಡ್ನಲ್ಲಿ ಅವರನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು.
ಪ್ರಕರಣದಲ್ಲಿ ಟಿಎಂಸಿ ಮುಖಂಡರನ್ನು ಅಕ್ರಮವಾಗಿ ಬಂಧಿಸಲಾಗಿದೆ, ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಯಲ್ಲಿ ಸುಮಾರು 6 ಗಂಟೆಗಳು ಕಳೆದರು.