ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೋಮವಾರ ಸುಮಾರು ಆರು ಗಂಟೆಗಳು ಸಿಬಿಐ ಕಚೇರಿಯ ಆವರಣದಲ್ಲಿ ಕಳೆದಿದ್ದಾರೆ.
ನಾರದ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ಇಬ್ಬರು ಸಚಿವರು, ಒಬ್ಬ ಶಾಸಕ ಹಾಗೂ ಪಕ್ಷದ ಮಾಜಿ ಮುಖಂಡರೊಬ್ಬರನ್ನು ಸಿಬಿಐ ಸೋಮವಾರ ಬೆಳಿಗ್ಗೆ ಬಂಧಿಸಿತು. ಅದರ ಬೆನ್ನಲ್ಲೇ ಸಿಎಂ ಮಮತಾ ಸಿಬಿಐ ಕಚೇರಿಗೆ ಧಾವಿಸಿದರು.
ಕಚೇರಿಯಿಂದ ತೆರಳುವಂತೆ ಸಿಬಿಐ ಅಧಿಕಾರಿಗಳು ಮನವಿ ಮಾಡುತ್ತಲೇ, 'ಪ್ರಕರಣದಲ್ಲಿ ಟಿಎಂಸಿ ಮುಖಂಡರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಸಿಬಿಐ ಮೊದಲು ನನ್ನನ್ನು ಬಂಧಿಸಲಿ' ಎಂದು ಸವಾಲು ಹಾಕಿದರು.
ಬಂಧನದ ಬಳಿಕ ನಾಲ್ವರು ಮುಖಂಡರನ್ನು ಸಿಬಿಐ ಕಚೇರಿಯ 15ನೇ ಮಹಡಿಯಲ್ಲಿರುವ ಕೊಠಡಿಗೆ ಕರೆತರಲಾಗಿತ್ತು. ಅದೇ ಕೊಠಡಿಯ ಹೊರಭಾಗದಲ್ಲಿ ಮಮತಾ ಬ್ಯಾನರ್ಜಿ ಕಾದಿದ್ದಾರೆ. ಸುಮಾರು 6 ಗಂಟೆಗಳ ನಂತರ ಅವರು ಸಿಬಿಐ ಕಚೇರಿಯಿಂದ ಹೊರಟಿರುವುದಾಗಿ ವರದಿಯಾಗಿದೆ.
ಸಾರಿಗೆ ಸಚಿವ ಫಿರ್ಹಾದ್ ಹಕೀಮ್, ಪಂಚಾಯತ್ ಸಚಿವ ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರಾ ಮತ್ತು ಟಿಎಂಸಿಯ ಮಾಜಿ ಮುಖಂಡ ಸೋವನ್ ಚಟರ್ಜಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ನಿಜಾಮ್ ಪ್ಯಾಲೇಸ್ನಲ್ಲಿರುವ ಸಿಬಿಐ ಕಚೇರಿಗೆ ಬರುವುದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಅವರು ಸಚಿವ ಹಕೀಮ್ ಅವರ ಮನೆಗೆ ತೆರಳಿದ್ದರು ಎಂದು ವರದಿಯಾಗಿದೆ.
ಸಿಬಿಐ ಕಚೇರಿಯ ಹೊರ ಭಾಗದಲ್ಲಿದ್ದ ಪತ್ರಕರ್ತರಿಗೆ ಮಮತಾ ಬ್ಯಾನರ್ಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.