ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಎರಡನೇ ಸುತ್ತಿನ ವಿಚಾರಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರವೂ ಹಾಜರಾದರು.
ಸೋನಿಯಾ ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆಲವು ಮಂದಿ ಕಾಂಗ್ರೆಸ್ ಸಂಸದರು ಹಾಗೂ ಕಾರ್ಯಕರ್ತರು ವಿಜಯ ಚೌಕ್ನಿಂದ ರಾಷ್ಟ್ರಪತಿ ನಿವಾಸದತ್ತ ಮೆರವಣಿಗೆ ಆರಂಭಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದರು.
‘ನಾವು ಜನಸಾಮಾನ್ಯರ ಪರ ಸಂಸತ್ನಲ್ಲಿ ಧ್ವನಿಯೆತ್ತಲು ಬಯಸಿದ್ದೆವು. ರಾಷ್ಟ್ರಪತಿ ಭವನದತ್ತ ತೆರಳುತ್ತಿದ್ದಾಗ ನಮ್ಮನ್ನು ಪೊಲೀಸರು ವಶಕ್ಕೆ ಪಡೆದರು’ ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಹೇಳಿದರು.
ಈ ಮಧ್ಯೆ, ಸೋನಿಯಾ ಗಾಂಧಿ ಅವರು ಇ.ಡಿ ಅಧಿಕಾರಿಗಳ ಎದುರು ಮೂರನೇ ದಿವಸ ತಮ್ಮ ಹೇಳಿಕೆ ದಾಖಲಿಸಿದರು.
ಬೆಳಿಗ್ಗೆ 11 ಗಂಟೆಗೆ ಇ.ಡಿ ಕಚೇರಿ ತಲುಪಿದ ಅವರು ವಿಚಾರಣೆ ಎದುರಿಸಿದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಜತೆಗಿದ್ದರು.