ನವದೆಹಲಿ: ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದ್ದು, ಆತಂಕ ಹೆಚ್ಚಿಸಿದೆ. 24ಗಂಟೆಗಳಲ್ಲಿ 24,882 ಹೊಸ ಪ್ರಕರಣ ದಾಖಲಾಗಿದೆ. ಇವು ಕಳೆದ 83 ದಿನಗಳ ಅವಧಿಯಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯ ಪ್ರಕರಣಗಳು.
ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಕಟಿಸಿದೆ. ಇದರ ಬೆನ್ನಲ್ಲೇ ಕಟ್ಟೆಚ್ಚರ ವಹಿಸಲು ಸರ್ಕಾರಗಳು ಒತ್ತು ನೀಡಿದೆ.
ಮಹಾರಾಷ್ಟ್ರ, ಪಂಜಾಬ್ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಸೋಂಕು ಹೆಚ್ಚಿರುವ ಕೆಲ ಜಿಲ್ಲೆಗಳಲ್ಲಿ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ಕ್ರಮಗಳಿಗೆ ಮುಂದಾಗಿವೆ.
ಕಳೆದ 24 ಗಂಟೆಗಳಲ್ಲಿ 24,882 ಪ್ರಕರಣ ದಾಖಲಾಗಿದ್ದು, 140 ಮಂದಿ ಮೃತಪಟ್ಟಿದ್ದಾರೆ. ಈ ಹಿಂದೆ ಗರಿಷ್ಠ ಸಂಖ್ಯೆಯಲ್ಲಿಅಂದರೆ 26,624 ಪ್ರಕರಣಗಳು ಕಳೆದ 2020ರ ಡಿಸೆಂಬರ್ 20ರಂದು ವರದಿಯಾಗಿದ್ದವು.
ಮಹಾರಾಷ್ಟ್ರ ಸರ್ಕಾರ ನಾಗಪುರ, ಠಾಣೆ ಸೇರಿ ಹಲವು ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದೆ. ಪುಣೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. 15ರಿಂದ ನಾಗ್ಫುರದಲ್ಲಿ ಲಾಕ್ಡೌನ್ ಜಾರಿಗೆ ಬರಲಿದೆ. ಪಂಜಾಬ್ ಸರ್ಕಾರ 8 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ್ದು, ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ರಜೆಯನ್ನು ಘೋಷಿಸಿದೆ.
ಮಧ್ಯಪ್ರದೇಶ ಸರ್ಕಾರವೂ ರಾತ್ರಿ ಕರ್ಫ್ಯೂ ವಿಧಿಸಲು ಮುಂದಾಗಿದೆ. ಇಂದೋರ್ ಮತ್ತು ಭೋಪಾಲ್ನಲ್ಲಿ ಭಾನುವಾರ ಅಥವಾ ಸೋಮವಾರದಿಂದ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
*
‘ದೇಶದಲ್ಲಿ ಪ್ರಸ್ತುತ ಕೋವಿಡ್ನ ಎರಡನೇ ಅಲೆ ಆರಂಭವಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಏನೋ ಆಗುತ್ತಿದೆ ಎಂಬುದು ನಿಜ. ಹೆಚ್ಚು ಪ್ರಕರಣಗಳು ವರದಿಯಾಗಲು ಮಾರ್ಗಸೂಚಿ ನಿಯಮ ಪಾಲಿಸುವಲ್ಲಿನ ಜನರ ಧೋರಣೆಯೇ ಕಾರಣ. -ಅನುರಾಗ್ ಅಗರವಾಲ್, ಜೀವವಿಜ್ಞಾನ ವಿಭಾಗದ ನಿರ್ದೇಶಕ, ಸಿಎಸ್ಐಆರ್