ಗೋಪೇಶ್ವರ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿದೆ. ಜೋಶಿಮಠ ಬಳಿಯ ಮಾರ್ವಾಡಿಯಲ್ಲಿರುವ ಅಲಕಾನಂದ ದಂಡೆಯಲ್ಲಿ ಇನ್ನೊಂದು ಶವ ಪತ್ತೆಯಾಗಿದ್ದು, ಮೃತರ ಸಂಖ್ಯೆಯು 72ಕ್ಕೆ ಏರಿಕೆಯಾಗಿದೆ.
72 ನೇ ಶವವು ಶುಕ್ರವಾರ ಸಂಜೆ ತಡವಾಗಿ ಪತ್ತೆಯಾಗಿದೆ. ಈಮಧ್ಯೆ, ಹಿಮಪಾತವಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಶನಿವಾರ 21ನೇ ದಿನವೂ ಮುಂದುವರೆದಿದೆ ಎಂದು ಚಮೋಲಿಯ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ. ಜೋಶಿ ಶನಿವಾರ ತಿಳಿಸಿದ್ದಾರೆ.
ಹಿಮಪಾತಕ್ಕೆ ಒಳಗಾದ ಪ್ರದೇಶಗಳಲ್ಲಿ ಇಲ್ಲಿಯವರೆಗೆ 72 ಶವಗಳು ಮತ್ತು 30 ಮಾನವ ದೇಹದ ಭಾಗಗಳನ್ನು ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 41 ಜನರನ್ನು ಗುರುತಿಸಲಾಗಿದ್ದು, ಇನ್ನೂ 132 ಜನರು ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 7ರಂದು ಸಂಭವಿಸಿದ ದುರಂತದಿಂದ ತಪೋವನ-ವಿಷ್ಣುಗಡ ವಿದ್ಯುತ್ ಯೋಜನೆಯುಹೆಚ್ಚಿನ ಹಾನಿಗೊಳಗಾಗಿತ್ತು. ರಾಜ್ಯ ಸರ್ಕಾರ ಹೊರಡಿಸಿದ ಪಟ್ಟಿಯ ಪ್ರಕಾರ 25 ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 3.52 ಕೋಟಿ ರೂ. ಠೇವಣಿ ಇಡಲಾಗಿದೆ ಎಂದು ಎನ್ಟಿಪಿಸಿಯು ವಕ್ತಾರ ತಿಳಿಸಿದ್ದಾರೆ.
ಕಾಣೆಯಾದವರ ಮರಣ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರ ನೀಡಿದ ನಂತರ ಉಳಿದ ಕುಟುಂಬಗಳಿಗೂ ಸಹ ಪರಿಹಾರವನ್ನು ನೀಡಲಾಗುವುದು ಎಂದು ಅವರು ಹೇಳಿದರು.