ಅಹಮದಾಬಾದ್: ಗುಜರಾತ್ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಆಮ್ ಆದ್ಮಿ ಪಕ್ಷದ (ಎಎಪಿ) ಭಯ ಕಾಡುತ್ತಿದೆ. ಹೀಗಾಗಿ ಕೇಸರಿ ಪಕ್ಷವು (ಬಿಜೆಪಿ) ತನ್ನ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರನ್ನು ಕೆಳಗಿಳಿಸಲು ನಿರ್ಧರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಾಧ್ಯಮ ವಿಭಾಗದ ಸಂಯೋಜಕಯಗ್ನೇಶ್ ದಾವೆ, ಹಗಲುಗನಸುಕಾಣುವುದನ್ನು ನಿಲ್ಲಿಸಿ. ಸಿ.ಆರ್. ಪಾಟೀಲ್ ಬಗ್ಗೆ ಯೋಚಿಸುವುದನ್ನು ಬಿಟ್ಟು ನಿಮ್ಮ ಮುಂದಿನ ಹಾದಿ ಬಗ್ಗೆ ಗಮನ ಹರಿಸಿ ಎಂದು ತಿರುಗೇಟು ನೀಡಿದ್ದಾರೆ.
ಗುಜರಾತ್ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಭೇಟಿ ಕೈಗೊಂಡಿರುವ ಕೇಜ್ರಿವಾಲ್, ಬಿಜೆಪಿಗೆ ತಮ್ಮ ಪಕ್ಷದ ಬಗ್ಗೆ ಆತಂಕವಿದೆ ಎಂದು ಟ್ವೀಟ್ ಮಾಡಿದ್ದಾರೆ.
'ಗುಜರಾತ್ ಬಿಜೆಪಿಯು ಎಎಪಿ ಬಗ್ಗೆ ಭಯಗೊಂಡಿದೆ. ಮೂಲಗಳ ಪ್ರಕಾರ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಿ.ಆರ್.ಪಾಟೀಲ್ ಅವರನ್ನು ಕೆಳಗಿಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಎಎಪಿ ವಿಚಾರವಾಗಿ ಬಿಜೆಪಿ ಇಷ್ಟೊಂದು ಭಯದಲ್ಲಿದೆಯೇ?' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಗ್ನೇಶ್, ಕೇಜ್ರಿವಾಲ್ ಹಗಲುಗನಸು ಕಾಣುವ ಹವ್ಯಾಸ ಬೆಳೆಸಿಕೊಂಡಿರುವಂತಿದೆ ಎಂದು ಟೀಕಿಸಿದ್ದಾರೆ.
गुजरात में भाजपा बुरी तरह से आम आदमी पार्टी से घबरायी हुई है। सूत्रों के मुताबिक़ जल्द ही गुजरात के भाजपा प्रदेश अध्यक्ष C R पाटिल को हटाया जा रहा है। क्या भाजपा इतनी ज़्यादा डरी हुई है?
— Arvind Kejriwal (@ArvindKejriwal) August 23, 2022
ಮುಂದುವರಿದು, 'ಸಿ.ಆರ್. ಪಾಟೀಲ್ ಬಗ್ಗೆ ಯೋಚಿಸುವುದನ್ನು ಬಿಟ್ಟು, ನೀವು ನಿಮ್ಮ ಕೆಲಸದ ಕಡೆಗೆ ಗಮನಹರಿಸಿ' ಎಂದು ಚಾಟಿ ಬೀಸಿದ್ದಾರೆ.
ಯಗ್ನೇಶ್ ಅವರಿಗೆ ದನಿಗೂಡಿಸಿರುವ ಗುಜರಾತ್ ಬಿಜೆಪಿ ವಕ್ತಾರ ರುತ್ವಿಜ್ ಪಟೇಲ್, 'ರಾಜಕೀಯ ಮತ್ತು ಸಮಾಜ ಸೇವೆಯನ್ನು ಮೂಲಗಳನ್ನು ಆಧರಿಸಿ ಮಾಡಲಾಗುವುದಿಲ್ಲ. ಬಿಜೆಪಿ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ನೀವು ನಿಮ್ಮ ಬಗ್ಗೆ ಮತ್ತು ನಿಮ್ಮ ಅಬಕಾರಿ ಸಚಿವರ (ಮನೀಶ್ ಸಿಸೋಡಿಯಾ) ಬಗ್ಗೆ ಯೋಚಿಸಿ' ಎಂದು ಟ್ವಿಟರ್ನಲ್ಲಿತಿವಿದಿದ್ದಾರೆ.
सूत्रों के हवालो से राजनीति और जनसेवा नहीं होती रेवड़ीवाल जी!!
— Dr. Rutvij Patel (@DrRutvij) August 23, 2022
भाजपा की ज्यादा फिक्र न करे, शराब मंत्री और अपनी फिक्र करें।
रेवड़ीवाल जी के पास कोई जिम्मेदारी है नही, बस अब सूत्रों की बातें करेंगे, सही ही कहा है खाली दिमाग शैतान का !! https://t.co/vm0hLqxGXo
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕಂದಾಯ ಸಚಿವ ರಾಜೇಂದ್ರ ತ್ರಿವೇದಿ ಹಾಗೂ ರಸ್ತೆ ಮತ್ತು ಕಟ್ಟಡ ಸಚಿವ ಪೂರ್ಣೇಶ್ ಮೋದಿ ಅವರನ್ನು ಸಚಿವ ಸ್ಥಾನದಿಂದ ಶನಿವಾರ ಇದ್ದಕ್ಕಿದ್ದಂತೆ ಕೆಳಗಿಳಿಸಿದ್ದಾರೆ. ಈ ಬೆಳವಣಿಗೆಗಳ ಬಳಿಕ ಕೇಜ್ರಿವಾಲ್, ಸಿ.ಆರ್.ಪಾಟಿಲ್ ಸ್ಥಾನದ ಬದಲಾವಣೆಗೆ ಬಗ್ಗೆ ಮಾತನಾಡಿದ್ದಾರೆ.
ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಜನರನ್ನು ಆರೋಪಿಗಳೆಂದು ಸಿಬಿಐ ಹೆಸರಿಸಿದೆ.ಕ್ರಿಮಿನಲ್ ಪಿತೂರಿ, ಸುಳ್ಳು ಖಾತೆ ಸೃಷ್ಟಿ ಹಾಗೂ ಅಧಿಕ ಲಾಭದ ಆರೋಪಗಳು ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಗುಜರಾತ್ ವಿಧಾನಸಭೆಗೆ ಈ ವರ್ಷದ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಿಯಮಿತವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕೇಜ್ರಿವಾಲ್, ಪ್ರಚಾರ ಸಭೆಗಳಲ್ಲಿ ಹಲವು ಭರವಸೆಗಳನ್ನು ನೀಡುತ್ತಿದ್ದಾರೆ. ಈವರೆಗೆ, ಉಚಿತ ವಿದ್ಯುತ್, ಮಾಸಿಕ ₹ 3,000 ನಿರುದ್ಯೋಗ ಭತ್ಯೆ, 10 ಲಕ್ಷ ಸರ್ಕಾರಿ ನೌಕರಿ ಸೃಷ್ಟಿ, 18 ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ₹ 1 ಸಾವಿರ ಸಹಾಯಧನ ಒದಗಿಸುವ ಭರವಸೆಗಳನ್ನು ನೀಡಿದ್ದ ಅವರು ಇದೀಗ, ದೆಹಲಿಯಲ್ಲಿ ಒದಗಿಸುತ್ತಿರುವಂತೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವುದಾಗಿ ಆಶಾಸ್ವನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.