ಚಂಡೀಗಡ: ಕೋವಿಡ್–19 ರೋಗಿಗಳಿಗೆ ನೀಡುವ ಸಲುವಾಗಿ ಪಾಣಿಪತ್ನಿಂದ ಫರೀದಾಬಾದ್ಗೆ ಆಮ್ಲಜನಕ ಸಾಗಿಸುತ್ತಿ್ದ ಟ್ಯಾಂಕರ್ಅನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಬುಧವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಪಾಣಿಪತ್ನಿಂದ ಫರೀದಾಬಾದ್ಗೆ ಬರುವಾಗ ದೆಹಲಿ ಮೂಲಕ ಟ್ಯಾಂಕರ್ ಸಾಗುತ್ತಿತ್ತು. ಆಗ, ಟ್ಯಾಂಕರ್ಅನ್ನು ದೋಚಲಾಗಿದೆ. ಸರ್ಕಾರವೇ ಇಂಥ ಕೃತ್ಯಗಳಲ್ಲಿ ತೊಡಗಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು’ ಎಂದರು.
‘ರಾಜ್ಯದ ಆಸ್ಪತ್ರೆಗಳಿಗೆ ಆಮ್ಲಜನಕ ಹೊತ್ತು ತರುವ ಟ್ಯಾಂಕರ್ಗಳಿಗೆ ಈಗ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ಈ ಘಟನೆ ಬಗ್ಗೆ ದೆಹಲಿ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದೂ ಹೇಳಿದರು.