ಚಂಡೀಗಡ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಡೇರಾದ ವ್ಯವಸ್ಥಾಪಕ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ರಂಜಿತ್ ಸಿಂಗ್ ಅವರ ಕೊಲೆ 2002ರ ಜುಲೈ 10ರಂದು ನಡೆದಿತ್ತು.
2017ರಲ್ಲಿ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಬಳಿಕ ರಾಮ್ ರಹೀಮ್ ಸಿಂಗ್ನನ್ನು ಬಂಧಿಸಲಾಗಿತ್ತು.
ವಿಶೇಷ ನ್ಯಾಯಾಲಯವು ಗುರ್ಮಿತ್ ರಹೀಮ್ ಸಿಂಗ್, ಕೃಷ್ಣ ಲಾಲ್, ಜಸ್ಬೀರ್ ಸಿಂಗ್, ಅವತಾರ್ ಸಿಂಗ್ ಮತ್ತು ಸಬ್ದಿಲ್ ಅವರನ್ನು ಕೊಲೆ ಪ್ರಕರಣದಲ್ಲಿ ದೋಷಿ ಎಂದು ತಿಳಿಸಿದೆ. ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ.
ಶಿಕ್ಷೆಯ ಪ್ರಮಾಣ ಇದೇ 12ರಂದು ಪ್ರಕಟವಾಗಲಿದೆ ಎಂದು ಸಿಬಿಐ ವಿಶೇಷ ಅಭಿಯೋಜಕ ಎಚ್.ಪಿ.ಎಸ್.ವರ್ಮ ತಿಳಿಸಿದ್ದಾರೆ.
ರಂಜಿತ್ ಸಿಂಗ್ ಕೊಲೆ ಪ್ರಕರಣವನ್ನು ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯದಿಂದ ಪಂಜಾಬ್, ಹರಿಯಾಣ ಅಥವಾ ಚಂಡೀಗಡದ ಯಾವುದೇ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು.