ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಚಿನ ಮುಖ್ಯ ಸೂತ್ರಧಾರರಾಗಿದ್ದು, ಇದಕ್ಕಾಗಿ ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ಪೊಲೀಸ್ ಅಧಿಕಾರಿಗಳನ್ನು ಅನುಕೂಲಕರವಾದ ವರ್ಗಾವಣೆ ನಡೆಸುವಲ್ಲೂ ದೇಶಮುಖ್ ಅವರು ಪ್ರಭಾವ ಬೀರಿದ್ದಾರೆ ಎಂದೂ ಇ.ಡಿ ಆರೋಪಿಸಿದೆ.
ದೇಶಮುಖ್ ಅವರ ಜಾಮೀನು ಅರ್ಜಿಗೆ ಪ್ರತಿಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಇ.ಡಿ ಈ ಆರೋಪಗಳನ್ನು ಮಾಡಿದ್ದು, ದೇಶಮುಖ್ ಅವರು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿದೆ.
‘ಅನಿಲ್ ದೇಶಮುಖ್ ಅವರು ಪುತ್ರ ಹೃಷಿಕೇಶ್ ದೇಶಮುಖ್, ಸಚಿನ್ ವಾಜೆ (ವಜಾಗೊಂಡಿರುವ ಪೊಲೀಸ್ ಅಧಿಕಾರಿ), ಸಂಜೀವ್ ಪಳಾಂದೆ ಮತ್ತು ಕುಂದನ್ ಶಿಂಧೆ ಜೊತೆ ಸೇರಿ ಸಂಚು ರೂಪಿಸಿದ್ದರು’ ಎಂದೂ ಇ.ಡಿ ಆರೋಪಿಸಿದೆ.