ನವದೆಹಲಿ: ಮಾತೃ ವಿಯೋಗದ ನೋವಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಪಘಾತಕ್ಕೀಡಾಗಿರುವ ಕ್ರಿಕೆಟಿಗ ರಿಷಭ್ ಪಂತ್ ಅವರ ಯೋಗಕ್ಷೇಮ ಕೋರಿದ್ದಾರೆ.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಅವರು, 'ಕ್ರಿಕೆಟಿಗ ರಿಷಬ್ ಪಂತ್ ಅವರ ಅಪಘಾತದಿಂದ ನೊಂದಿದ್ದೇನೆ. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಪ್ರಕಟಿಸಿದ್ದಾರೆ.
ಉತ್ತರಾಖಂಡದ ರೂರ್ಕಿ ಬಳಿ ಶುಕ್ರವಾರ ಮುಂಜಾನೆ ಕಾರು ಅಪಘಾತಕ್ಕೀಡಾಗಿ ವಿಕೆಟ್ ಕೀಪರ್-ಬ್ಯಾಟರ್ ತೀವ್ರವಾಗಿ ಗಾಯಗೊಂಡಿದ್ದಾರೆ.
Distressed by the accident of noted cricketer Rishabh Pant. I pray for his good health and well-being. @RishabhPant17
25 ವರ್ಷದ ಪಂತ್ ಅವರ ತಲೆ ಮತ್ತು ಕಾಲಿಗೆ ಗಾಯವಾಗಿದ್ದು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನಿಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.
ಪಂತ್ ಅವರ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿತ್ತು. ಅಪಘಾತದ ಬಳಿಕ ತೆಗೆಯಲಾದ ಚಿತ್ರದಲ್ಲಿ ಪಂತ್ ಅವರಿದ್ದ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿರುವ ಸ್ಥಿತಿಯಲ್ಲಿದೆ. ಪಂತ್ ಅವರ ತಲೆಗೆ ಬ್ಯಾಂಡೇಜ್ ಹಾಕಲಾದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ.